ಬೆಳಗಾವಿ: ಜಿಲ್ಲಾಡಳಿತ, ಸ್ವಾತಂತ್ರ್ಯ ಸೈನಿಕರು ಹಾಗೂ ಉತ್ತರಾಧಿಕಾರಿಗಳ ಸಂಘ ಮತ್ತು ಭಾರತ ಸೇವಾದಳ ಸಂಯುಕ್ತ ಆಶ್ರಯದಲ್ಲಿ ಆ. 9ರಂದು ಮಧ್ಯಾಹ್ನ 12ಕ್ಕೆ ನಗರದ ಗೋಗಟೆ ಕಾಲೇಜು ಎದುರಿನ ಜಿಲ್ಲಾ ಸ್ವಾತಂತ್ರ್ಯ ಸೈನಿಕ ಭವನದಲ್ಲಿ ‘ಕ್ರಾಂತಿ ದಿನ–ಕ್ವಿಟ್ ಇಂಡಿಯಾ ದಿನಾಚರಣೆ’ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾತಂತ್ರ್ಯ ಯೋಧರ ಹಾಗೂ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ರಾಜೇಂದ್ರ ಕಲಘಟಗಿ ತಿಳಿಸಿದ್ದಾರೆ.
‘ಕ್ರಾಂತಿ ದಿನ ಅಂಗವಾಗಿ ಪ್ರತಿ ವರ್ಷ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವಾತಂತ್ರ ಯೋಧರಿಗೆ ಚಹಾ ಕೂಟವನ್ನು ರಾಷ್ಟ್ರಪತಿ ಅವರು ಏರ್ಪಡಿಸಿ ಪ್ರತಿ ರಾಜ್ಯದಿಂದ ಐವರಂತೆ ದೇಶದ 150 ಸ್ವಾತಂತ್ರ್ಯ ಯೋಧರನ್ನು ಆಮಂತ್ರಿಸಿ ಗೌರವಿಸುತ್ತಿದ್ದರು. ಆದರೆ, ಈ ವರ್ಷ ಕೋವಿಡ್ ಕಾರಣ ಜಿಲ್ಲಾಡಳಿತದಿಂದ ಇಲ್ಲೇ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಸ್ವಾತಂತ್ರ್ಯ ಯೋಧರನ್ನು ಆಯ್ಕೆ ಮಾಡಿ, ಕೇಂದ್ರ ಸರ್ಕಾರದಿಂದಲೇ ಸನ್ಮಾನಿತರಿಗೆ ಪರಿಕರಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಜಿಲ್ಲೆಯಿಂದ ಅಪ್ಪಣ್ಣ ಶಿವರಾಯಪ್ಪ ಕರಲಿಂಗಣ್ಣವರ ಅಕ್ಕತಂಗೇರಹಾಳ (ಘಟಪ್ರಭಾ), ಮತ್ತು ಶಿವಪ್ಪ ಅಣ್ಣಿಗೇರಿ (ದಢೇರಕೊಪ್ಪ, ಸವದತ್ತಿ ತಾ.) ಅವರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರಪತಿ ಅವರ ಪರವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಈ ಸ್ವಾತಂತ್ರ್ಯ ಯೋಧರನ್ನು ಗೌರವಿಸಲಿದ್ದಾರೆ. ಸ್ವಾತಂತ್ರ್ಯ ಯೋಧರಾದ ಗಂಗಾಧರ ಕಾಮತ, ಅಚ್ಯುತ ವಡವಿ, ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಅನಿಲ ಪೋತದಾರ, ಜಿಲ್ಲಾ ಕಾರ್ಯದರ್ಶಿ ವಿಠಲ ಹೆಗಡೆ, ಕೇಂದ್ರ ಸಮಿತಿ ಸದಸ್ಯರಾದ ರಾಜೇಂದ್ರ ಮಾಳಗಿ, ಸ್ವಾತಂತ್ರ್ಯ ಸೈನಿಕರ ಸಂಘದ ಪದಾಧಿಕಾರಿಗಳಾದ ಸಂತೋಷ ಬೆಂಡಿಗೇರಿ, ವಿವೇಕಾನಂದ ಪೊಟೆ, ಕಿರಣ ಬೇಕವಾಡ, ಪಿ.ಬಿ. ಮರೆನ್ನವರ, ಸುಭಾಷ ಹೊನಗೇಕರ, ಸಂತೋಷ ಹೊಂಗಲ, ಸಂಜೀವ ಜಾಧವ, ದಿಲೀಪ ಸೋಹನಿ ಪಾಲ್ಗೊಳ್ಳುವರು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.