ADVERTISEMENT

ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆದಿದ್ದು ದುರಂತದ ಕಥೆ: ಶಾಸಕ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 6:51 IST
Last Updated 31 ಜುಲೈ 2023, 6:51 IST
Laxman Savadi
Laxman Savadi   

ಬೆಳಗಾವಿ: ‘ಅಧಿವೇಶನ ಮುಗಿದರೂ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆದಿರುವುದು ದುರಂತದ ಕಥೆ. ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಇತಿಹಾಸದಲ್ಲಿ ಇದೇ ಮೊದಲು. ಇಂತಹ ಇತಿಹಾಸವನ್ನು ಬಿಜೆಪಿಯವರು ಬರೆಯುತ್ತಾರೆ’ ಎಂದು ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಹೊಸ ಸರ್ಕಾರ ರಚನೆಯಾದ ಮೇಲೆ ಶಾಸಕರ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸುವುದು ವಾಡಿಕೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರಾಜ್ಯ ಕಾಂಗ್ರೆಸ್‌ ನಾಯಕರ ಸಭೆ ಕರೆದಿದ್ದರಿಂದ ಶಾಸಕಾಂಗ ಪಕ್ಷದ ಸಭೆ ಮುಂದಕ್ಕೆ ಹೋಗಿತ್ತು. ಈಗ ಮತ್ತೆ ಸಭೆ ಕರೆಯಬೇಕಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ. ವಿರೋಧ ಪಕ್ಷದವರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದರು.

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್‌ ಅವರಿಗೆ ಟಾಸ್ಕ್‌ ನೀಡಿದ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸವದಿ, ‘ಅದು ಟಾಸ್ಕ್ ಅಲ್ಲ. ಒಂದು ಪಕ್ಷದಲ್ಲಿದ್ದಾಗ ಓಡಾಡಿ ಕೆಲಸ ಮಾಡಬೇಕು. ಲೋಕಸಭೆ ಚುನಾವಣೆ‌ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಸ್ಟ್ 2ರಂದು ಸಭೆ ಕರೆದಿದ್ದಾರೆ. ಆ ಸಭೆಗೆ ಹೋಗುತ್ತೇವೆ. ಅಲ್ಲಿ ನಮಗೆ ಕೊಡುವ ಜವಾಬ್ದಾರಿ ನಿಭಾಯಿಸುತ್ತೇವೆ’ ಎಂದು ತಿಳಿಸಿದರು.

ಸಿ.ಟಿ.ರವಿ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕೊಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ‘ಅವರು ಯಾರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಅವಶ್ಯಕತೆ ನಮಗಿಲ್ಲ. ಒಂದುವೇಳೆ ರವಿ ಅಧ್ಯಕ್ಷರಾದರೆ ದುರ್ದೈವದ ಸಂಗತಿ. ಗೆಳೆತನಕ್ಕೂ ಮತ್ತು ಪಕ್ಷಕ್ಕೂ ವ್ಯತ್ಯಾಸವಿರುತ್ತದೆ. ಒಂದು ರವಿ ಅಧ್ಯಕ್ಷರಾಗಿ, ಆ ಪಕ್ಷದಲ್ಲಿ ಬೆಳೆಯುತ್ತಾನೆ ಎಂದರೆ ಶುಭಕೋರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.