ADVERTISEMENT

ಲ್ಯಾಪ್‌ಟಾಪ್‌ ಕೊಟ್ಟಿಲ್ಲ, ಹೃದಯ ಗೆಲ್ಲುತ್ತೇವೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 25 ಮೇ 2022, 11:21 IST
Last Updated 25 ಮೇ 2022, 11:21 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಳಗಾವಿ: ‘ನಾವು ಮತದಾರರಿಗೆ ಯಾವುದೇ ಲ್ಯಾಪ್‌ಟಾಪ್ ಕೊಟ್ಟಿಲ್ಲ. ಅವರ ಹೃದಯ ಗೆದ್ದು ಮತ ಕೇಳುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದರು.

‘ಮತದಾರರನ್ನು ಸೆಳೆಯಲು ವಿರೋಧ ಪಕ್ಷದವರು ಲ್ಯಾಪ್‌ಟಾಪ್‌ ವಿತರಿಸುತ್ತಿದ್ದಾರೆ’ ಎಂಬ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿಕೆಗೆ ಮೇಲಿನಂತೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದರು.

‘ವಿಧಾನಪರಿಷತ್‌ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಪ್ರಕಾಶ ಹುಕ್ಕೇರಿ, ಪದವೀಧರ ಕ್ಷೇತ್ರಕ್ಕೆ ಸುನೀಲ ಸಂಕ ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರೂ ಬಹಳ ದಿನಗಳಿಂದ ಸಿದ್ಧತೆ ನಡೆಸಿದ್ದಾರೆ. ಹಲವು ಶಿಕ್ಷಣ, ಸಂಘ–ಸಂಸ್ಥೆಗಳ ಮುಖ್ಯಸ್ಥರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ನಮಗೇ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಸುಶಿಕ್ಷಿತ ಮತದಾರರ ಮೇಲೆ ನಮಗೆ ವಿಶ್ವಾಸವಿದೆ’ ಎಂದರು.

ADVERTISEMENT

ನಾಯಕರನ್ನು ಸೃಷ್ಟಿಸುವ ಶಕ್ತಿ ಇದೆ:‘ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ‌ಶಿಕ್ಷಕರೂ ಅಲ್ಲ, ಪದವೀಧರರೂ ಅಲ್ಲ’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ನಮ್ಮಲ್ಲಿ ಟಿಕೆಟ್‌ಗೆ ಮೂರ‍್ನಾಲ್ಕು ಜನ ಆಕಾಂಕ್ಷಿಗಳಿದ್ದರು. ಆದರೆ, ಸಮೀಕ್ಷೆ ನಡೆಸಿ ಹಿರಿಯ ನಾಯಕ ಪ್ರಕಾಶ ಹುಕ್ಕೇರಿ ಅವರಿಗೆ ಟಿಕೆಟ್ ನೀಡಿದ್ದೇವೆ. ಹುಕ್ಕೇರಿ ಅವರಿಗೆ ನೂರಾರು ನಾಯಕರನ್ನು ಸೃಷ್ಟಿಸುವ ಶಕ್ತಿ ಇದ್ದು, ಲೋಕಸಭಾ, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದ ಅನುಭವ ಇದೆ. ಚಿಕ್ಕೋಡಿಯನ್ನು ಮಾದರಿ ಕ್ಷೇತ್ರವಾಗಿಸಿದ್ದಾರೆ. ಅವರಿಗೆ ಟಿಕೆಟ್‌ ನೀಡಿದ್ದರಲ್ಲಿ ತಪ್ಪಿಲ್ಲ’ ಎಂದು ತಿರುಗೇಟು ನೀಡಿದರು.

‘ಕಾಂಗ್ರೆಸ್‌ಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎನ್‌.ಬಿ. ಬನ್ನೂರ ಮನವೊಲಿಸುವ ಯತ್ನ ನಡೆದಿದೆ’ ಎಂದು ಉತ್ತರಿಸಿದರು.

ಪಠ್ಯಕ್ರಮ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ದೇಶದ ಚರಿತ್ರೆ ಬದಲಿಸಲು ಹೊರಟಿದ್ದಾರೆ. ಅಧಿಕಾರ ಹಿಡಿದಿದ್ದೇವೆ ಎಂದು ಬಿಜೆಪಿ ಕಾರ್ಯಸೂಚಿಯನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಯತ್ನಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಮಕ್ಕಳ ಮನಸ್ಸಿನಲ್ಲಿ ಕೋಮು ವಿಷಬೀಜ ಬಿತ್ತುವ ಯತ್ನ ಕೈಬಿಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.