ಬೆಳಗಾವಿ ವಿಭಾಗದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತೆ ದಾಕ್ಷಾಯಿಣಿ ಚೌಶೆಟ್ಟಿ (ಕೂತವರು) ಅವರು ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ವೇಳೆ ಅಧಿಕಾರಿಗಳು ಫಿಂಗರ್ ಟೆಸ್ಟ್ ಮಾಡಿದರು
ಬೆಳಗಾವಿ: ಬೆಳಗಾವಿ ವಿಭಾಗದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತೆ ದಾಕ್ಷಾಯಿಣಿ ಚೌಶೆಟ್ಟಿ ಉದ್ಯಮಿಯೊಬ್ಬರಿಂದ ₹25 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವಿಕಾಸ ಕಂಪೋಸಿಟ್ಸ್ ಸಂಸ್ಥೆಯ ವ್ಯವಸ್ಥಾಪಕ ವಿಕಾಸ ಪ್ರಮೋದ ಕೋಕಣೆ ನೀಡಿದ ದೂರು ಆಧರಿಸಿ ಲೊಕಾಯುಕ್ತ ಎಸ್ಪಿ ಹನುಮಂತರಾಯ ಮತ್ತು ಇನ್ಸ್ಪೆಕ್ಟರ್ ನಿರಂಜನ ಪಾಟೀಲ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.
‘ವಿಕಾಸ ಅವರು ತಮ್ಮ ಸಂಸ್ಥೆಯಿಂದ ಪೂರೈಸಲಾದ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ‘ಸಿ’ ಫಾರ್ಮ್ ಪಡೆದು ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಗೆ ಸಲ್ಲಿಸದ ಕಾರಣ, ಇಲಾಖೆಯಿಂದ ಕಂಪನಿಗೆ ಜಪ್ತಿ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಕಾಸ ಅವರು ಸಂಸ್ಥೆಯಿಂದ ಜಿಎಸ್ಟಿ ಮೊತ್ತ ₹41 ಸಾವಿರ ಕಟ್ಟಿದ್ದರು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
‘ಈ ಹಣವನ್ನು ಮರಳಿ ಪಡೆಯಲು (ರಿಫಂಡ್) ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪಡೆಯಲು ₹25 ಸಾವಿರ ಲಂಚಕ್ಕೆ ಆಯುಕ್ತೆ ದಾಕ್ಷಾಯಿಣಿ ಬೇಡಿಕೆ ಇಟ್ಟದ್ದರು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.