ಬೆಳಗಾವಿ: ಇಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಸೈನಿಕರ ರ್ಯಾಲಿಯು, ಮದ್ರಾಸ್ ರೆಜಿಮೆಂಟ್ ಅಡಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು ಮತ್ತು ಅವರ ಕುಟುಂಬದವರ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆ ಕಲ್ಪಿಸಿತು.
ಬೆಳಗಾವಿ, ಧಾರವಾಡ, ಗದಗ ಮತ್ತು ವಿಜಯಪುರ ಜಿಲ್ಲೆಗಳ 1,233 ಮಾಜಿ ಸೈನಿಕರು, ಅವರ ಕುಟುಂಬದವರು ಮತ್ತು ಹುತಾತ್ಮ ಯೋಧರ ಪತ್ನಿಯರು ರ್ಯಾಲಿಗೆ ಆಗಮಿಸಿದ್ದರು.
ಯೋಗಕ್ಷೇಮ ವಿಚಾರಿಸುವ ಜತೆಗೆ, ಅವರ ಕುಂದುಕೊರತೆ ಆಲಿಸಲಾಯಿತು. ಲಭ್ಯವಿರುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಲಾಯಿತು.
ಬ್ಯಾಂಕಿಂಗ್ ಮತ್ತು ವಿವಿಧ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲಾಯಿತು. ಹುತಾತ್ಮ ಯೋಧರ ಪತ್ನಿಯರನ್ನು ಸನ್ಮಾನಿಸಲಾಯಿತು.
ಮದ್ರಾಸ್ ರೆಜಿಮೆಂಟಲ್ ಸೆಂಟರ್–ವೆಲ್ಲಿಂಗ್ಟನ್ನ ಕಮಾಂಡೆಂಟ್ ಬ್ರಿಗೇಡಿಯರ್ ಕೃಷ್ಣೆಂದು ದಾಸ, ‘ರಾಷ್ಟ್ರಕ್ಕಾಗಿ ಉತ್ತಮ ಸೇವೆ ನೀಡಿದ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಏನೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತರಬೇಕು. ನಾವು ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ’ ಎಂದು ಹೇಳಿದರು.
ಮದ್ರಾಸ್ ರೆಜಿಮೆಂಟಲ್ ಸೆಂಟರ್–ವೆಲ್ಲಿಂಗ್ಟನ್ನ ರೆಕಾರ್ಡ್ಸ್ ವಿಭಾಗದ ಚೀಫ್ ರೆಕಾರ್ಡ್ಸ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಕಲಾಮ್ ಸಿಂಗ್ ಸ್ವಾಗತಿಸಿದರು.
ವಿವಿಧ ಆಸ್ಪತ್ರೆಗಳ ವೈದ್ಯರ ತಂಡಗಳು 689 ಜನರ ಆರೋಗ್ಯ ತಪಾಸಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.