
ಸಂಕೇಶ್ವರ: ‘ಮಕ್ಕಳು ಕೇವಲ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪಡೆಯಬೇಕೆಂದು ಪಾಲಕರು ಒತ್ತಾಯ ಮಾಡುವುದು ಬೇಡ. ಬದಲಿಗೆ ಇನ್ನೂ ವಿವಿಧ ಬಗೆಯ ಉದ್ಯೋಗಾವಕಾಶಗಳಿದ್ದು, ಅದರ ಕುರಿತು ಪಾಲಕರು ಮಕ್ಕಳಿಗೆ ತಿಳಿವಳಿಕೆ ನೀಡಬೇಕು’ ಎಂದು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ ಕರೆ ನೀಡಿದರು.
ಇಲ್ಲಿನ ಎ.ಬಿ.ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಉಡಾನ ಉತ್ಸವದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
‘ಪದವಿ ಪಡೆದ ನಂತರವೂ ಕೆ.ಎ.ಎಸ್ ಹಾಗೂ ಐ.ಎ.ಎಸ್ ಪರೀಕ್ಷಗಳನ್ನು ಬರೆಯುವ ಅವಕಾಶಗಳಿವೆ. ಅದರ ಕಡೆಯೂ ಪಾಲಕರು ಗಮನ ನೀಡಬೇಕು. ವ್ಯಾಪಾರ ವೃತ್ತಿಗಳಲ್ಲಿಯೂ ವಿಪುಲ ಅವಕಾಶಗಳಿದ್ದು, ಅದರತ್ತ ಗಮನಹರಿಸಲು ತಿಳಿವಳಿಕೆ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ವಿ.ಎಸ್ ಸಂಘದ ಸಂಚಾಲಕ ವಿನಯಗೌಡ ಪಾಟೀಲ, ‘ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ. ಇದರಿಂದ ಭವಿಷ್ಯದಲ್ಲಿ ವಿವಿಧ ಕಾಉಇಲೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಹಾಗಾಗಿ ಪಾಲಕರು ಮುಂಜಾಗ್ರತೆ ವಹಿಸಬೇಕು’ ಎಂದರು.
ಇದಕ್ಕೂ ಮುನ್ನ ವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಎಸ್.ಡಿ.ವಿ.ಎಸ್ ಸಂಘದ ಸಂಚಾಲಕರಾದ ಆರ್.ಬಿ.ಪಾಟೀಲ, ಬಾಳಾಸಾಹೇಬ ವೈರಾಗಿ,ಸಂತೋಷ ಪಾಟೀಲ, ಸಂಘದ ಕಾರ್ಯದರ್ಶಿ ಗಂಗಾಧರ ಕೊಟಗಿ, ಕಾರ್ಯನಿರ್ವಹಕ ಅಧಿಕಾರಿ ಬಿ.ಎ.ಪೂಜಾರಿ, ಪ್ರಾಚಾರ್ಯ ಗಜೇಂದ್ರ ಪವಾರ ಇದ್ದರು.