ಬೈಲಹೊಂಗಲ: ಉತ್ತರ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿರುವ ಮಲಪ್ರಭಾ ನದಿ ದಡವು ಹಲವು ವರ್ಷಗಳಿಂದ ಪ್ಲಾಸ್ಟಿಕ್, ತ್ಯಾಜ್ಯ ವಸ್ತುಗಳಿಂದ ಕಲುಷಿತಗೊಳ್ಳುತ್ತಿರುವುದನ್ನು ಮನಗಂಡು ಮಲಪ್ರಭಾ ನದಿ ಸ್ವಚ್ಛತಾ ಅಭಿಯಾನವನ್ನೂ ಮೇ 18 ರಂದು ಬೆಳಿಗ್ಗೆ 8 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೆಎಲ್ಇ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸುಮಾರು ಮೂರು ಜಿಲ್ಲೆಗಳ ಸಾವಿರಾರು ಎಕರೆ ಕೃಷಿ ಜಮೀನು ಹಾಗೂ ಕುಡಿಯುವ ನೀರಿನ ಜೀವ ನಾಡಿಯಾಗಿರುವ ಮಲಪ್ರಭಾ ನದಿ ಕಲುಷಿತಗೊಂಡಿದೆ. ಇದರಿಂದ ರೋಗ ಹರಡುವ ಭೀತಿ ಹೆಚ್ಚಾಗಿದೆ. ಜಾಲಿಕೊಪ್ಪ ತಪೋಕ್ಷೇತ್ರದ ಶ್ರೀ ಶಿವಾನಂದ ಗುರೂಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಅಭಿಯಾನದಲ್ಲಿ, ವಿವಿಧ ಸಂಘಟನೆಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ವೈದ್ಯರು, ಕಲಾವಿದರ ಬಳಗ, ವಿವಿಧ ಶಾಲೆ, ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು, ರೈತರು ಪಾಲ್ಗೊಳ್ಳಲ್ಲಿದ್ದಾರೆ’ ಎಂದರು.
ರೈತ ಮುಖಂಡ ಮಹಾಂತೇಶ ಕಮತ, ನಾಗೇಶ ತೋಟಗಿ, ಅರುಣ ಬೋಳೆತ್ತಿನ, ಮಡಿವಾಳಪ್ಪ ಹೋಟಿ, ಚಂದನ ಕೌಜಲಗಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.