ADVERTISEMENT

ಜನರನ್ನು ತಲುಪಲು ಮಾಧ್ಯಮ ಸಹಕಾರಿ: ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 13:49 IST
Last Updated 1 ಮಾರ್ಚ್ 2021, 13:49 IST
ಬೆಳಗಾವಿಯಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ‘ಮಾಧ್ಯಮ ಮಂಥನ’ ಕಾರ್ಯಾಗಾರದಲ್ಲಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು
ಬೆಳಗಾವಿಯಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ‘ಮಾಧ್ಯಮ ಮಂಥನ’ ಕಾರ್ಯಾಗಾರದಲ್ಲಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು   

ಬೆಳಗಾವಿ: ‘ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಧ್ಯಮ ಮಾಡುತ್ತಿರುವುದು ಶ್ಲಾಘನೀಯ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ಗೋಮಟೇಶ ಸಭಾಭವನದಲ್ಲಿ ಪಕ್ಷದ ಬೆಳಗಾವಿ ವಿಭಾಗದ ಮಾಧ್ಯಮ ಸಂಚಾಲಕರಿಗೆ ಸೋಮವಾರ ಆಯೋಜಿಸಿದ್ದ ‘ಮಾಧ್ಯಮ ಮಂಥನ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮಾಧ್ಯಮವು ಪ್ರಜಾಪ್ರಭುತ್ವದದ 4ನೇ ಆಧಾರ ಸ್ತಂಭವಾಗಿದೆ. ಶಾಸಕಾಂಗ ಜನಪರ ಕಾಯ್ದೆಗಳನ್ನು ರೂಪಿಸಿದರೆ ಕಾರ್ಯಾಂಗ ಅವುಗಳನ್ನು ಅನುಷ್ಠಾನಕ್ಕೆ ತರುತ್ತದೆ. ತಪ್ಪಿತಸ್ಥರನ್ನು ಸರಿ ದಾರಿಗೆ ತರಲು ನ್ಯಾಯಾಂಗ ಕಾರ್ಯನಿರ್ವಹಿಸಿದರೆ ಈ ಮೂರು ಅಂಗಗಳಿಗೆ ಜೋಡಣೆಯ ಕೊಂಡಿಯಾಗಿ ಕಾರ್ಯನಿರ್ವಹಿಸುವುದೆ ಮಾಧ್ಯಮವಾಗಿದೆ. ಇಂದಿನ ದಿನಮಾನಗಳಲ್ಲಿ ರಾಜಕೀಯ ಪಕ್ಷಕ್ಕೆ ಮಾಧ್ಯಮ ಅತ್ಯಂತ ಅವಶ್ಯವಾಗಿದೆ’ ಎಂದರು.

ADVERTISEMENT

ಮಾಧ್ಯಮದಿಂದ ಆಗಿದೆ

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ‘ಚಹಾ ಮಾರುತ್ತಿದ್ದ ಸಾಮಾನ್ಯ ವ್ಯಕ್ತಿ ಪ್ರಧಾನ ಮಂತ್ರಿಯಾಗುವ ನಿಟ್ಟಿನಲ್ಲಿ, ಅವರು ಮಾಡಿದ ಸತ್ಕಾರ್ಯಗಳನ್ನು ದೇಶದಾದ್ಯಂತ ಮನೆ ಮನೆಗೆ ತಿಳಿಸುವ ಕಾರ್ಯ ಮಾಧ್ಯಮದಿಂದ ಆಗಿದೆ. ಒಂದು ಸುಭದ್ರ ಸರ್ಕಾರ ರಚನೆಯಾಗಲು ಹಾಗೂ ಯಾವುದೇ ಅಹಿತರ ನಿರ್ಧಾರಗಳು ತಕ್ಷಣವಾಗಿ ಗೊತ್ತಾಗುವುದು ಮಾಧ್ಯಮದಿಂದ’ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಮಾತನಾಡಿ, ‘ಇಂದು ಬಿಜೆಪಿ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ಪಕ್ಷವಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತಕ್ಕೆ ಬರಬೇಕಾದರೆ ವಿರೋಧಿಗಳು ಮಾಡಿರುವ ಜನವಿರೋಧಿ ಕಾರ್ಯ ಒಂದು ಕಡೆಯಾದರೆ ಬಿಜೆಪಿ ರಾಷ್ಟ್ರಾಭಿಮಾನದೊಂದಿಗೆ ಅತ್ಯುತ್ತಮ ಆಡಳಿತ ನೀಡುತ್ತಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಶ್ರೇಯಸ್ಸು ಮಾಧ್ಯಮಕ್ಕಿದೆ. ಪಕ್ಷದ ಮಾಧ್ಯಮದ ಸಂಚಾಲಕರು ತಮಗೆ ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು’ ಎಂದು ಹೇಳಿದರು.

ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆದವು.

ಶಾಸಕರಾದ ಅನಿಲ ಬೆನಕೆ ಮತ್ತು ಅಭಯ ಪಾಟೀಲ, ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಬೆಳಗಾವಿ ವಿಭಾಗ ಮಾಧ್ಯಮ ಪ್ರಭಾರಿ ಸಿದ್ದು ಮೋಗಲಿಶೆಟ್ಟರ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೆರ್ಲಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೋಹಿತೆ, ಸುಭಾಷ ಪಾಟೀಲ, ದಾದಾಗೌಡ ಬಿರಾದಾರ, ಗಿರೀಶ ದೋಂಗಡೆ, ಮುರಘೇಂದ್ರ ಪಾಟೀಲ, ಗ್ರಾಮಾಂತರ ಜಿಲ್ಲಾ ಘಟಕದ ವಕ್ತಾರ ಸಂಜಯ ಕಂಚಿ, ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ, ಹನುಮಂತ ಕೊಂಗಾಲಿ, ನಾಗನಗೌಡ ದೊಡಗೌಡ, ಶಶಿ ಬಾಡಕರ, ಮೃಣಾಲಿ ದೇಶಪಾಂಡೆ, ಪ್ರವೀಣ ಕೊಪ್ಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.