ADVERTISEMENT

‘ಕನಕದಾಸರೂ ಬಂಡಾಯ ಕವಿ’

ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಮುನ್ನೋಟ: ಸಮಾಲೋಚನಾ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:30 IST
Last Updated 14 ಸೆಪ್ಟೆಂಬರ್ 2024, 15:30 IST
ಬೆಳಗಾವಿಯಲ್ಲಿ ಶನಿವಾರ ನಡೆದ ‘ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಮುನ್ನೋಟ: ವಿದ್ವಾಂಸರೊಂದಿಗೆ ಸಮಾಲೋಚನಾ ಗೋಷ್ಠಿ’ಯಲ್ಲಿ ಕಾ.ತ. ಚಿಕ್ಕಣ್ಣ ಮಾತನಾಡಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ‘ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಮುನ್ನೋಟ: ವಿದ್ವಾಂಸರೊಂದಿಗೆ ಸಮಾಲೋಚನಾ ಗೋಷ್ಠಿ’ಯಲ್ಲಿ ಕಾ.ತ. ಚಿಕ್ಕಣ್ಣ ಮಾತನಾಡಿದರು   

ಬೆಳಗಾವಿ: ‘ಕನಕದಾಸರ ಸಾಹಿತ್ಯ ಈಗಾಗಲೇ 15 ಭಾಷೆಗಳಿಗೆ ಭಾಷಾಂತರವಾಗಿದೆ. ವಚನ ಸಾಹಿತ್ಯದ ತರುವಾಯ ಅತ್ಯಂತ ಹೆಚ್ಚು ಮಹತ್ವ ಕನಕದಾಸರ ಸಾಹಿತ್ಯಕ್ಕೆ ಸಿಕ್ಕಿದೆ’ ಎಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಹೇಳಿದರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಮುನ್ನೋಟ: ವಿದ್ವಾಂಸರೊಂದಿಗೆ ಸಮಾಲೋಚನಾ ಗೋಷ್ಠಿ’ಯಲ್ಲಿ ಅವರು ಮಾತನಾಡಿದರು.

‘ಕನಕದಾಸರ ಸಾಹಿತ್ಯದಲ್ಲಿ ಭಕ್ತಿ, ಕ್ರಾಂತಿಕಾರಿ, ಸಮ ಸಮಾಜ, ವ್ಯವಸ್ಥೆಯ ಸುಧಾರಣೆಯ ಬೀಜ ಮಂತ್ರವಿದೆ. ಭಕ್ತಿ ಎನ್ನುವುದು ಆತ್ಮವಿಕಾಸದ ಬೆಳಕು. ಅದು ಇಂದು ಬೇರೆ ದಾರಿಯನ್ನು ಹಿಡಿಯುತ್ತಿದೆ. ತತ್ವಪದ ಸಾಹಿತ್ಯವನ್ನು 50 ಸಂಪುಟಗಳಲ್ಲಿ ಮುದ್ರಿಸುವ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ.ಇದರಲ್ಲಿ 32 ಸಂಪುಟಗಳು ಈಗಾಗಲೇ ಮುದ್ರಣಗೊಂಡಿವೆ’ ಎಂದರು.

ADVERTISEMENT

‘ಕನಕದಾಸ ಕೇಂದ್ರದ ಮುಖ್ಯ ಉದ್ದೇಶವೇ ಕನಕದಾಸರ ಸಮಗ್ರ ಮಾಹಿತಿಯನ್ನು ಸಮಾಜಕ್ಕೆ ಕೊಡುವುದು. ಅದನ್ನು ವಿದ್ಯಾರ್ಥಿಗಳು, ಮಕ್ಕಳು ಮತ್ತು ವಿದ್ವಾಂಸರನ್ನು ಆದರಿಸಿ ಮೂರು ರೀತಿಯಲ್ಲಿ ಮಾಡಲಾಗುತ್ತಿದೆ. ಈಗಾಗಲೇ 250 ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

ಸಾಹಿತಿ ಸರಜೂ ಕಾಟ್ಕರ್ ಮಾತನಾಡಿ, ‘ಕನಕದಾಸರನ್ನು ಬೇರೆ ಭಾಷೆಯ ಕವಿಗಳೊಂದಿಗೆ ತೌಲನಿಕ ಅಧ್ಯಯನ ಆಗಬೇಕಾಗಿದೆ’ ಎಂದರು.

ಪ್ರಾಚಾರ್ಯ ಎಂ.ಜಿ. ಹೆಗಡೆ, ‘ದಾಸ ಅಥವಾ ದಾಸಪಂಥ ಎನ್ನುವುದು ಯಾವಾಗ ಬಂತು ಹುಡುಕಬೇಕಿದೆ. ಕನಕರ ಕಾಲದಲ್ಲಿ ಇದರ ಸುಳಿವು ನಮಗೆ ಸಿಗುವುದಿಲ್ಲ. ಮಾಸ್ತಿ ಅವರ ಇಂಗ್ಲಿಷ್‌ ಬರಹಗಳಲ್ಲಿ ಇದರ ಕುರಿತು ಇದೆ’ ಎಂದು ಅಭಿಪ್ರಾಯ ಪಟ್ಟರು.

ಸಾಹಿತಿ ಕವಿತಾ ಕುಸುಗಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ವಂದಿಸಿದರು. ಗೋಷ್ಠಿಯಲ್ಲಿ 40 ವಿದ್ವಾಂಸರು ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಮುನ್ನೋಟದ ಕುರಿತು ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.