ADVERTISEMENT

ಶಿಕ್ಷಣ, ಉದ್ಯೋಗ, ವಸತಿಗೆ ಆದ್ಯತೆ ನೀಡಿ: ಸುರೇಶ ಅಂಗಡಿ ಸೂಚನೆ

ರೈಲ್ವೆ ಖಾತೆ ರಾಜ್ಯ ಸಚಿವ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 19:45 IST
Last Updated 17 ಫೆಬ್ರುವರಿ 2020, 19:45 IST
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕುರಿತ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಡಿಸಿಪಿ ಸೀಮಾ ಲಾಟ್ಕರ್‌, ಎಎಸ್ಪಿ ಅಮರನಾಥ ರೆಡ್ಡಿ ಇದ್ದಾರೆ
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕುರಿತ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಡಿಸಿಪಿ ಸೀಮಾ ಲಾಟ್ಕರ್‌, ಎಎಸ್ಪಿ ಅಮರನಾಥ ರೆಡ್ಡಿ ಇದ್ದಾರೆ   

ಬೆಳಗಾವಿ: ‘ಪರಿಶಿಷ್ಟರ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಲು ಸರ್ಕಾರ ಸಿದ್ಧವಿದೆ. ಶಿಕ್ಷಣ, ಉದ್ಯೋಗ, ವಸತಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಇಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕುರಿತ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೌರ್ಜನ್ಯಕ್ಕೆ ಒಳಗಾಗುವ ದಲಿತರನ್ನು ರಕ್ಷಿಸುವ ಜೊತೆಗೆ ಸರ್ಕಾರದ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸುವ ಕೆಲಸವನ್ನು ಮುಖಂಡರು ಮತ್ತು ಅಧಿಕಾರಿಗಳು ಮಾಡಬೇಕು. ದಲಿತರ ಮೇಲಿನ ದೌರ್ಜನ್ಯ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ. ಇದರಿಂದ ಸಮುದಾಯಕ್ಕೆ ಅನುಕೂಲ ಆಗಬೇಕು’ ಎಂದು ಹೇಳಿದರು.

ADVERTISEMENT

ಅತಿಕ್ರಮಣ-ಪರಿಶೀಲನೆಗೆ ಸೂಚನೆ:

‘ದಲಿತರಿಗೆ ನೀಡಲಾಗಿರುವ ಸ್ಮಶಾನ ಭೂಮಿ ಅತಿಕ್ರಮಣ ಆಗಿರುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ತಹಶೀಲ್ದಾರರು ಪರಿಶೀಲಿಸಿ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ನಿರ್ದೇಶನ ನೀಡಿದರು.

ಸವದತ್ತಿ, ಅಥಣಿ, ಬೈಲಹೊಂಗಲ, ಹುಕ್ಕೇರಿ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿ ಒದಗಿಸು ಪ್ರಸ್ತಾವ ಮತ್ತು ಜಮೀನು ಗುರುತಿಸುವ ಕುರಿತು ಹಿಂದಿನ ಸಭೆಯ ನಡಾವಳಿ ಕುರಿತು ವಿಸ್ತೃತ ಚರ್ಚೆಯಾಯಿತು. ‘ದಲಿತರಿಗೆ ಸ್ಮಶಾನ ಭೂಮಿ ಇಲ್ಲದಿರುವುದರಿಂದ ಕೆಲವೊಮ್ಮೆ ಅಂತ್ಯಕ್ರಿಯೆ ನಡೆಸುವುದು ಕಷ್ಟವಾಗುತ್ತಿದೆ’ ಎಂದು ಸದಸ್ಯ ಅಶೋಕ ಕುಮಾರ್ ಅಸೋದೆ ಅಸಮಾಧಾನ ವ್ಯಕ್ತಪಡಿಸಿದರು.

ವಾಲ್ಮೀಕಿ ತಪೋವನ:

‘ವಾಲ್ಮೀಕಿ ತಪೋವನ ನಿರ್ಮಾಣಕ್ಕೆ ನಗರದಲ್ಲಿ ಜಮೀನು ಲಭ್ಯವಿಲ್ಲ. ಹೀಗಾಗಿ, ಎಸ್.ಟಿ. ಮೀಸಲು ವಿಧಾನಸಭಾ ಕ್ಷೇತ್ರವಾದ ಯಮಕನಮರಡಿಯಲ್ಲಿ 5 ಎಕರೆ ಜಾಗೆ ಪಡೆದು ತಪೋವನ ನಿರ್ಮಿಸಬೇಕು’ ಎಂದು ಸದಸ್ಯ ವಿಜಯಕುಮಾರ್ ತಳವಾರ ಕೋರಿದರು.

ಇದಕ್ಕೆ ಒಪ್ಪಿದ ಜಿಲ್ಲಾಧಿಕಾರಿ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕುರಿತ ತಾಲ್ಲೂಕು ಮಟ್ಟದ ಸಮಿತಿ ರಚನೆಗೆ ಎಲ್ಲ ತಹಶೀಲ್ದಾರರು ಪ್ರಸ್ತಾವ ಕಳುಹಿಸಬೇಕು. ಎಲ್ಲ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ನಿಯಮಿತವಾಗಿ ಸಭೆ ನಡೆಸಿ, ತಮ್ಮ ಹಂತದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಸಮರ್ಪಕವಾಗಿ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಪೊಲೀಸರು ಹಾಗೂ ಸರ್ಕಾರಿ ಅಭಿಯೋಜಕರ ನಿರ್ಲಕ್ಷ್ಯದಿಂದಾಗಿ, ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿದೆ’ ಎಂದು ಸದಸ್ಯ ಅಶೋಕ ಕುಮಾರ್ ದೂರಿದರು.

ಶಿಸ್ತುಕ್ರಮ:

ಹೆಚ್ಚುವರಿ ಎಸ್ಪಿ ಅಮರನಾಥ್ ರೆಡ್ಡಿ ಮಾತನಾಡಿ, ‘ಶೇ.70ರಷ್ಟು ಸಾಕ್ಷಿಗಳ ವ್ಯತಿರಿಕ್ತ ಹೇಳಿಕೆ, ಶೇ 10ರಷ್ಟು ತನಿಖಾಧಿಕಾರಿಗಳ ತಪ್ಪಿನಿಂದ ಹಾಗೂ ಶೇ.10ರಷ್ಟು ಪ್ರಕರಣಗಳಲ್ಲಿ ಅಭಿಯೋಜಕರ ಕಾರಣದಿಂದ ಶಿಕ್ಷೆ ಪ್ರಮಾಣ ಕಡಿಮೆ ಆಗುವುದು ಕಂಡುಬರುತ್ತಿದೆ. ನಿರ್ಲಕ್ಷ್ಯ ತೋರುವ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೂಡ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.

ದೌರ್ಜನ್ಯ ಪ್ರಕರಣಗಳ ಪ್ರಭಾರಿ ಅಭಿಯೋಜಕ ಪ್ರಾಣೇಶ ಭರತನೂರ, ‘ದೌರ್ಜನ್ಯ ಪ್ರಕರಣಗಳಲ್ಲಿ ಅತಿ ಹೆಚ್ಚಿನ ಶಿಕ್ಷೆಯಾಗಿದೆ’ ಎಂದರು.

ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ರವಿ ಕರಲಿಂಗಣ್ಣವರ, ಅಶೋಕ ತೇಲಿ, ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ ಸಭೆ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.