ಬೆಳಗಾವಿ: ‘ಗಡಿಯಲ್ಲಿರುವ ಮರಾಠಿ ಭಾಷಿಗರಿಗೆ ಕರ್ನಾಟಕ ಸರ್ಕಾರ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಮಹಾರಾಷ್ಟ್ರ ಸಚಿವ ಏಕನಾಥ ಶಿಂಧೆ ಅವರಿಗೆ ಕೊಲ್ಹಾಪುರದಲ್ಲಿ ಮನವಿ ಸಲ್ಲಿಸಿದೆ.
‘ನಾವು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಪದೇ ಪದೇ ಅನ್ಯಾಯ ಆಗುತ್ತಲೇ ಇದೆ. ಕನ್ನಡ ಸಂಘಟನೆಗಳವರು ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಕನ್ನಡ ಧ್ವಜಸ್ತಂಭ ಸ್ಥಾಪಿಸಿ ಅಲ್ಲಿರುವ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಾರಾಠಿ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಬೇಕು. ಅದಕ್ಕಾಗಿ ನೀವು ಬೆಳಗಾವಿಗೆ ಭೇಟಿ ನೀಡಬೇಕು. ನಮ್ಮ ಪರ ಪ್ರಚಾರ ನಡೆಸಬೇಕು. ಗಡಿ ಸಮಸ್ಯೆ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಬಲವಾದ ವಾದ ಮಂಡಿಸಬೆಕು. ನಮಗೆ ಆಗುತ್ತಿರುವ ದೌರ್ಜನ್ಯ ತಪ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ ಎಂದು ಆಗ್ರಹಿಸಿದ್ದಾರೆ.
‘ಉತ್ತರ ನೀಡಬೇಕಿದೆ’
ಇತ್ತ, ಇಲ್ಲಿ ಶನಿವಾರ ಸಭೆ ಸೇರಿದ್ದ ಎಂಇಎಸ್ ತಾಲ್ಲೂಕು ಘಟಕದ ಮುಖಂಡರು, ‘ನಗರಪಾಲಿಕೆ ಮುಂಭಾಗ ಕನ್ನಡ ಧ್ವಜ ಹಾರಿಸುವ ಮೂಲಕ ಕನ್ನಡ ಹೋರಾಟಗಾರರು ಮರಾಠಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇದಕ್ಕೆ ನಾವು ತಕ್ಕ ಉತ್ತರ ನೀಡಬೇಕು’ ಎನ್ನುವ ನಿರ್ಣಯ ಕೈಗೊಂಡಿದ್ದಾರೆ.
ಮುಖಂಡ ಮನೋಹರ ಕಿಣೇಕರ, ‘ಮುಂಬರುವ ಪಾಲಿಕೆ ಚುನಾವಣೆ ದೃಷ್ಟಿಯಿಂದ ಕನ್ನಡಿಗರನ್ನು ಒಗ್ಗಟ್ಟು ಮಾಡಲು ಪಾಲಿಕೆ ಮುಂಭಾಗ ಕನ್ನಡ ಧ್ವಜ ಹಾರಿಸಲಾಗಿದೆ. ಪ್ರಾದೇಶಿಕ ಕಚೇರಿ ಮೊದಲಾದ ಕಡೆಗಳಲ್ಲಿ ಒಳಗಡೆ ಹಾರಿಸಿಲ್ಲ. ಅದು ಅಧಿಕೃತ ಅಲ್ಲ. ಅಧಿಕೃತವಾಗಿದ್ದರೆ ಕಚೇರಿ ಆವರಣದ ಹಾರಿಸಲಿ’ ಎಂದು ಸವಾಲು ಹಾಕಿದರು.
ಜಿ.ಪಂ. ಸದಸ್ಯೆ ಸರಸ್ವತಿ ಪಾಟೀಲ, ಮುಖಂಡ ಎಲ್.ಐ. ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.