ಬೆಳಗಾವಿ: ತಮಗಾಗಿರುವ ವೇತನ ತಾರತಮ್ಯ ಕುರಿತು ದನಿ ಎತ್ತಿದ್ದ ಹಾಗೂ ರಾಯಬಾಗ ಬಿಇಒ ಕಚೇರಿಯ ಎಸ್ಡಿಎ ಬೆದರಿಕೆ ಹಾಕಿದ್ದರಿಂದ ಮನನೊಂದು ಪತ್ರ ಬರೆದಿದ್ದ ರಾಯಬಾಗ ತಾಲ್ಲೂಕು ನಿಡಗುಂದಿಯ ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯ ಶಿಕ್ಷಕ, ಕವಿ ವೀರಣ್ಣ ಮಡಿವಾಳರ ಅವರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಸ್ಪಂದಿಸಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಡಿ. 26ರಂದು ‘ವೇತನ ತಾರತಮ್ಯ: ವೀರಣ್ಣ ದನಿ’ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಗಮನಿಸಿದ ಅವರು, ‘ಶಿಕ್ಷಕ ವೀರಣ್ಣ ಅವರೊಂದಿಗೆ ಮಾತನಾಡಿ ಸಂಪೂರ್ಣ ವಿವರ ಪಡೆದಿದ್ದೇನೆ. ಎಸ್ಡಿಎ ಬೆದರಿಕೆ ಹಾಕಿದ ಪ್ರಕರಣ ಕುರಿತು ವಿಚಾರಣೆ ಮಾಡಲು ಇಲಾಖೆಯ ಬೆಳಗಾವಿ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ಸೂಚಿಸಿದ್ದೇನೆ. ವೀರಣ್ಣ ಅವರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದಾರೆ.
‘ವೀರಣ್ಣ ಪ್ರತಿಭಾವಂತ, ಭರವಸೆಯ ಕವಿ. ಈಗಾಗಲೇ ಹಲವು ಪ್ರತಿಷ್ಠಿತ ಗೌರವಗಳಿಗೆ ಭಾಜನರಾಗಿದ್ದಾರೆ. ಅಂಥವರು ಮೇಷ್ಟ್ರು ಆಗಿರುವುದಕ್ಕೆ ಇಲಾಖೆ ಹೆಮ್ಮೆ ಪಡಬೇಕು. ಪ್ರತಿಭೆ ಮತ್ತು ಬದ್ಧತೆ ಇರುವವರು ಈಗಿನ ಅಗತ್ಯ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.