ಹುಕ್ಕೇರಿ: ತಾಲ್ಲೂಕಿನ ರೈತರು ಮತ್ತು ಮನೆ ಬಳಕೆದಾರರಿಗೆ ದಿನದ 24 ತಾಸು ವಿದ್ಯುತ್ ಪೂರೈಸುವ ನೂತನ ಯೋಜನೆಗೆ ಕೇಂದ್ರ ಸರ್ಕಾರ ಸಹಕರಿಸುವುದರ ಜತೆಗೆ ಅನುಮತಿಸಬೇಕೆಂದು ಕೇಂದ್ರ ಸರ್ಕಾರದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಶಾಸಕ ನಿಖಿಲ್ ಕತ್ತಿ ಮನವಿ ಮಾಡಿಕೊಂಡಿದ್ದಾರೆ.
ಈಚೆಗೆ ನವದೆಹಲಿಯಲ್ಲಿ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿದ ಶಾಸಕ ನಿಖಿಲ್ ಕತ್ತಿ ಅವರು ಸಹಕಾರಿ ತತ್ವದಡಿ ಗ್ರಾಹಕರಿಗೆ ಮತ್ತು ರೈತರಿಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ದೇಶದ ಏಕೈಕ ಸಂಸ್ಥೆಯಾಗಿದೆ ಎಂದು ಸಂಘದ ಕಾರ್ಯವೈಖರಿ ವಿವರಿಸಿದ್ದಾರೆ.
ಸಹಕಾರಿ ತತ್ವದಡಿ ವಿದ್ಯುತ್ ಸರಬರಾಜು ಮಾಡುವ ದೇಶದ ಏಕೈಕ ಸಂಘಕ್ಕೆ ಕೇಂದ್ರ ಸರ್ಕಾರ ಸೋಲಾರ ಮತ್ತು ವಿಂಡ್ ಪವರ್ ಯೋಜನೆಯಡಿ ಹುಕ್ಕೇರಿ ತಾಲ್ಲೂಕನ್ನು ಪೈಲಟ್ ತಾಲ್ಲೂಕೆಂದು ಘೋಷಿಸಿ ಸಂಘಕ್ಕೆ ಅವಶ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ವಿನಂತಿಸಿಕೊಂಡರು.
ಭರವಸೆ: ಕೇಂದ್ರ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಬೇಡಿಕೆಗೆ ವಿಶೇಷ ಆದ್ಯತೆ ನೀಡಿ ಪೈಲಟ್ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕ ನಿಖಿಲ್ ಕತ್ತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.