
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಶಾಲಾ, ಕಾಲೇಜುಗಳ 15 ವಿದ್ಯಾರ್ಥಿನಿಯರನ್ನು ಸಂಸತ್ ಕಲಾಪ ವೀಕ್ಷಣೆಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದ ಮೂಲಕ ಕರೆದೊಯ್ಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಡಿಸೆಂಬರ್ 15ರಂದು ಬೆಳಿಗ್ಗೆ 8.45ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಸಂಸದೆ ಪ್ರಿಯಾಂಕಾ ಮತ್ತು ಎಲ್ಲ ಮಕ್ಕಳು ನವದೆಹಲಿಗೆ ಪ್ರಯಾಣ ಬೆಳೆಸುವರು.
2024-25ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಕೋಮಲಾ ಹವಾಲ್ದಾರ, ದಾನೇಶ್ವರಿ ಚೌಗಲಾ, ಸ್ನೇಹಾ ಪೂಜೇರಿ, ಸೃಷ್ಟಿ ಪಡೋಲ್ಕರ್, ಅಮೃತಾ ತೆರಣಿ, ವಿಶಾಲಾಕ್ಷಿ ಶೇಲಾರ, ರೂಪಾ ಹಡಗಿನಾಳ, ನಿರ್ಮಿತಾ ಸವದತ್ತಿ, ರೇವತಿ ಮಾದರ, ಸೃಷ್ಟಿ ಅಕ್ಕಿವಾಟೆ, ಸಂಜನಾ ಪಾಟೀಲ, ಐಶ್ವರ್ಯಾ ಪಾಟೀಲ, ಕಾವೇರಿ ಮಲ್ಲಾಪುರೆ ಮತ್ತಿತರರು ದೆಹಲಿಗೆ ಹೋಗುವರು. ಅವರೊಂದಿಗೆ ಪ್ರಿಯಾಂಕಾ ಆಪ್ತ ಸಹಾಯಕರು ತೆರಳುವರು.
‘ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನ ವೀಕ್ಷಿಸಲು ಆಯ್ದ ಶಾಲೆ, ಕಾಲೇಜು ವಿದ್ಯಾರ್ಥಿನಿಯರಿಗೆ ಅವಕಾಶವಿದೆ. ಅದೇ ರೀತಿ ನವದೆಹಲಿಯಲ್ಲಿ ನಡೆಯುವ ಸಂಸತ್ ಕಲಾಪಗಳನ್ನು ವೀಕ್ಷಿಸಲು ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಗ್ರಾಮೀಣ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ’ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.