ಮೂಡಲಗಿ: ‘ಧರ್ಮದ ಜಾಗೃತಿ ಇದ್ದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲಸಲು ಸಾಧ್ಯವಿದೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ತಾಲ್ಲೂಕಿನ ಯಾದವಾಡದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಗಜಾನನ ಮಂದಿರದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆಯನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಯ ಬಗ್ಗೆ ಅಧಿವೇಶದನದಲ್ಲಿ ಪ್ರಸ್ತಾಪಿಸಿರುವೆ. ಸಂಸದರ ಅಭಿವೃದ್ಧಿ ನಿಧಿಯಿಂದ ಯಾದವಾಡಕ್ಕೆ ಸಮುದಾಯ ಭವನ ಇಲ್ಲವೆ ಗ್ರಾಮಸ್ಥರು ತಿಳಿಸುವ ಕೆಲಸವನ್ನು ಮಾಡಿಕೊಡುತ್ತೇನೆ ಎಂದರು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿದರು.
ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಚೌಕಿ ಮಠದ ಶಿವಯೋಗಿ ದೇವರು, ತೊಂಡಿಕಟ್ಟಿ ವೆಂಕಟೇಶ ಮಹಾರಾಜರು, ಸಿದ್ದಪ್ರಭಾ ಸ್ವಾಮೀಜಿ, ಚನ್ನಬಸಪ್ಪ ಮುತ್ಯಾ ಹುಬ್ಬಳ್ಳಿ ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗೋವಿಂದ ಕೊಪ್ಪದ, ರಮೇಶ ಉಟಗಿ, ತಾಲ್ಲೂಕಾ ಪಂಚಾಯ್ತಿ ಮಾಜಿ ಸದಸ್ಯ ಶಂಕರ ಬೆಳಗಲಿ, ಯಾದವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಬೂತಾಳಿ, ಉಪಾಧ್ಯಕ್ಷ ಕಲ್ಮೇಶ ಗಾಣಗಿ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.