ಬೆಳಗಾವಿ: ಸವದತ್ತಿ ತಾಲ್ಲೂಕಿನ ಚಚಡಿಯಲ್ಲಿ 2015ರ ಡಿ.29ರಂದು ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹2.10 ಲಕ್ಷ ದಂಡ ವಿಧಿಸಿ, ಇಲ್ಲಿನ 10ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜುಲೈ 31ರಂದು ತೀರ್ಪು ನೀಡಿದೆ.
ಚಚಡಿಯ ಶಿವಾನಂದ ಬೀರಪ್ಪ ಕುರಬರ ಶಿಕ್ಷೆಗೆ ಒಳಗಾದವರು.
ಗ್ರಾಮದಲ್ಲಿ ಕೃಷಿಭೂಮಿಯ ಒಡ್ಡು ನಿರ್ಮಾಣದ ವಿಚಾರವಾಗಿ ಕಲಹ ಏರ್ಪಟ್ಟಿತ್ತು. ಶಿವಾನಂದ ಕುರಬರ ಮತ್ತು ಸಿದ್ದವ್ವ ಕುರಬರ ಅವರು, ಸಾವಿತ್ರಿ ಕುರಬರ ಅವರ ಹೊಲಕ್ಕೆ ನುಗ್ಗಿದ್ದರು. ಅಲ್ಲಿ ನೀರು ಹಾಯಿಸುತ್ತಿದ್ದ ಸಾವಿತ್ರಿ ಅವರ ಸಹೋದರ ಶಂಕ್ರಣ್ಣ ಅವರನ್ನು ಶಿವಾನಂದ ಕೊಲೆ ಮಾಡಿದರು. ಇದಕ್ಕೆ ಸಿದ್ದವ್ವ ಸಹಕರಿಸಿದ್ದರು. ಈ ಸಂಬಂಧ ಸಾವಿತ್ರಿ ಮುರಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಿಪಿಐ ಆಗಿದ್ದ ಬಿ.ಎಸ್.ಮಂಟೂರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್.ಎ.ಬಾರಾವಲಿ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 10ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗುರುರಾಜ ಶಿರೋಳ ತೀರ್ಪು ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.