ಬೆಳಗಾವಿ: ‘ಸಂಗೀತ ವಿಶ್ವದ ಭಾಷೆ. ಜಾತಿ, ಮತ, ಪಂಥವಿಲ್ಲದ ಭಾಷೆ ಇದು. ಕೋಪ, ತಾಪ, ಸಂತೋಷ, ದುಃಖ, ಪ್ರೀತಿ ಹೀಗೆ ಮನುಷ್ಯ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ಈ ಲಯಬದ್ಧವಾದ ಸಂಗೀತ ಕಲಿತಾಗ ಜೀವನವೇ ಲಯಬದ್ಧವಾಗಿರುತ್ತದೆ. ಅದು ಶಿಸ್ತನ್ನು ತಂದುಕೊಡುತ್ತದೆ’ ಎಂದು ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯಾ ಭಟ್ ಹೇಳಿದರು.
ಇಲ್ಲಿನ ಗುರುಪ್ರಸಾದ್ ನಗರದ ಸಪ್ತಸ್ವರ ಸಂಗೀತ ವಿದ್ಯಾಲಯದವರು ಈಚೆಗೆ ಆಯೋಜಿಸಿದ್ದ 19ನೇ ವಾರ್ಷಿಕ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.
‘ಸಂಗೀತ ಕೇಳಿದಾಗ ಮನಸ್ಸಿನಲ್ಲಿ ಶಾಂತಿ ಮೂಡುತ್ತದೆ. ಈ ರೀತಿ ಶಾಂತಿ ಮೂಡಿಸುವ ವಾತಾವರಣ ದೇಶದ ತುಂಬೆಲ್ಲಾ ಪಸರಿಸಬೇಕು’ ಎಂದು ಆಶಿಸಿದರು.
ನಿರ್ಮಲಾ ಪ್ರಕಾಶ ಅವರ ಗಾಯನ ಗಮನಸೆಳೆಯಿತು.
ಸಪ್ತಸ್ವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇದಾರ, ಮಾಲಕಂಸ, ಸಾರಂಗ, ಯಮನ ಮುಂತಾದ ರಾಗಗಳನ್ನು ಪ್ರಸ್ತುತಪಡಿಸಿ, ಭಾವಗೀತೆ, ಭಕ್ತಿಗೀತೆ, ಜನಪದ ಗೀತೆಗಳನ್ನು ಹಾಡಿದರು. ವಾಮನ ವಾಗೂಕರ, ನಿರಂಜನ ಮೂರ್ತಿ, ನಾರಾಯಣ ಗಣಾಚಾರಿ, ಜಿತೇಂದ್ರ ಸಾಬಣ್ಣವರ ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡಿದರು.
ಡಾ.ಕಿಶೋರ ಭಟ್, ಪ್ರಕಾಶ ಅಯ್ಯರ್ ಇದ್ದರು. ಸುಷ್ಮಾ ಕೃಷ್ಣಮೂರ್ತಿ ಸ್ವಾಗತಿಸಿದರು. ಡಾ.ಸ್ವಪ್ನಾ ಕುಲಕರ್ಣಿ ಪರಿಚಯಿಸಿದರು. ವೀಣಾ ಹೆಗಡೆ ನಿರೂಪಿಸಿದರು. ವರ್ಷಾ ಹೆಗಡೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.