ಗೋಕಾಕ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಅವಹೇಳನ ಮತ್ತು ತ್ರಿಪುರ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮುಸ್ಲಿಮರ ಮೇಲಿನ ದೌರ್ಜನ್ಯ ಖಂಡಿಸಿ ಗುರುವಾರ ಇಲ್ಲಿನ ಜಮಿಯತ ಉಲ್ಮಾ ಸಂಘಟನೆಯ ಸದಸ್ಯರು ಪ್ರತಿಭಟಿಸಿ, ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
‘ವಸೀಂ ರಿಜ್ವಿ ಎನ್ನುವವರು ಪದೇ ಪದೇ ಪೈಗಂಬರ್ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಿದ್ದಾರೆ. ಅವರ ಹೇಳಿಕೆಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರ ಮಾತುಗಳಿಂದ ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
‘ತ್ರಿಪುರದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಅವರ ಸಂವಿಧಾನಿಕ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಹೀಗಿದ್ದರೂ ಅಲ್ಲನ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಅಮಾಯಕರ ಪ್ರಾಣ, ಆಸ್ತಿ–ಪಾಸ್ತಿ ರಕ್ಷಿಸಬೇಕು’ ಎಂದು ಆಗ್ರಹಿಸಿದರು.
‘ದೇಶದಾದ್ಯಂತ ನೆಲೆಸಿರುವ ಮುಸ್ಲಿಮರಿಗೆ, ಅವರ ಧಾರ್ಮಿಕ ಸ್ಥಳಗಳಿಗೆ ಸೂಕ್ತ ರಕ್ಷಣೆ ಕೊಡಬೇಕು’ ಎಂದು ಕೋರಿದರು.
ಮುಫ್ತಿ ಖಾಜಾ, ಖಾರಿ ಜಬಿವುಲ್ಲಾ, ಸದಾಖತ ಅಲ್ಲಿ, ಫಯಾಜ್ ಅವಟಿ, ಇಫ್ತಿಯಾನ ಕುಂಬಾರಿ, ಅಜಿಂ ಚಿಕ್ಕಕುದರಿ, ಮೊಹ್ಮದ ಅಸೀಫ ಇನಾಮಿ, ಅಬ್ದುಲ್ಗಣಿ ನೇರ್ಲಿ, ಮೌಲಾನಾ ಫಯಾಜ, ಇನಾಮಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.