ಬೆಳಗಾವಿ: ಕೋವಿಡ್ ಹಿನ್ನೆಲೆಯಲ್ಲಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಸರಳವಾಗಿ, ಸಾಂಪ್ರದಾಯಕವಾಗಿ ಆಚರಿಸಿದರು.
ವಿವಿಧ ದೇವಸ್ಥಾನಗಳ ಆವರಣದಲ್ಲಿದ್ದ ನಾಗರ ಮೂರ್ತಿಗೆ ಹಲವರು ಹಾಲೇರೆದರು. ಹಲವರು ಮಣ್ಣಿನಿಂದ ತಯಾರಿಸಲಾದ ನಾಗರ ಮೂರ್ತಿಯನ್ನು ಮನೆಗೆ ಕೊಂಡೊಯ್ದು, ಪೂಜೆ ಮಾಡಿ ಹಾಲೆರೆದರು. ಹಬ್ಬದ ನಿಮಿತ್ತ ಮನೆಯಲ್ಲಿ ವಿವಿಧ ಬಗೆಯ ಉಂಡಿ, ಚೂಡಾ ಮಾಡಿ ಸವಿದರು. ಜೋಕಾಲಿ ಕಟ್ಟಿ, ಆಟವಾಡಿದರು.
ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ನಾಗರ ಮೂರ್ತಿಗೆ ಹಾಲು ಎರೆದರು. ದೇವಸ್ಥಾನದೊಳಗೆ ಪ್ರವೇಶಿಸುವ ಪ್ರತಿಯೊಬ್ಬರ ದೇಹದ ಉಷ್ಣಾಂಶವನ್ನು ಪರೀಕ್ಷಿಸಲಾಗುತ್ತಿತ್ತು. ಸ್ಯಾನಿಟೈಸರ್ ಕೂಡ ನೀಡಲಾಗುತ್ತಿತ್ತು. ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮೇಲಿಂದ ಮೇಲೆ ಸೂಚನೆ ನೀಡುತ್ತಿರುವುದು ಕಂಡುಬಂದಿತು.
‘ಕೋವಿಡ್ ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಸಂಪ್ರದಾಯವನ್ನು ಬಿಡಬಾರದು ಎನ್ನುವ ಕಾರಣಕ್ಕಾಗಿ ಸಾಂಕೇತಿಕವಾಗಿ ಉಂಡಿ, ಚೂಡಾ ಮಾಡಿದ್ದೇವೆ. ಪ್ರತಿವರ್ಷ ಇದ್ದಂತಹ ಹುರುಪು, ಹುಮ್ಮಸ್ಸು ಇಲ್ಲ’ ಎಂದು ಮಂಜುನಾಥ ಪಾಟೀಲ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.