ರಾಯಬಾಗ:‘ಕೃಷಿಮೇಳದಿಂದ ರೈತರಿಗೆ ಕೃಷಿಯಲ್ಲಿ ಆಗಿರುವ ಹೊಸ ಹೊಸ ಸಂಶೋಧನೆಗಳು, ಆವಿಷ್ಕಾರ ಮತ್ತು ಕೃಷಿಯಲ್ಲಾದ ಬದಲಾವಣೆಗಳ ಮಾಹಿತಿ ಸಿಗಲಿದೆ. ರೈತರಿಗೆ ಪಶುಗಳ ರಕ್ಷಣೆ, ತಂತ್ರಜ್ಞಾನಗಳ ಬೆಳವಣಿಗೆ, ತಮ್ಮ ಭೂಮಿಯ ಫಲವತ್ತತೆಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಮಾಹಿತಿ ದೊರಕಲಿದೆ. ರೈತರು ಈ ಕೃಷಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಹೇಳಿದರು.
ತಾಲ್ಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದ 38ನೇ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮಠದ ಆವರಣದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕೃಷಿ ಮೇಳಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎಂ.ಮಗದುಮ್ಮ ಮಾತನಾಡಿ, ‘ಕೃಷಿಗೆ ಉತ್ತೇಜನ ನೀಡುವತ್ತ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ರೈತರು ತಮ್ಮ ಜಮೀನಿನ ಬದು, ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳನ್ನು ಬೆಳೆಸುವುದರಿಂದ ವಾತಾವರಣವೂ ಶುದ್ಧೀಕರಣಗೊಂಡು ಮಳೆಯಾಗಲು ಸಹಕರಿಸುತ್ತದೆ’ ಎಂದರು.
ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ, ಕೆಪಿಸಿಸಿ ಸದಸ್ಯ ಅರ್ಜುನ ನಾಯಿಕವಾಡಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲಾ ಪಾಟೀಲ, ಸಿದ್ಧಲಿಂಗ ಹಿರೇಕುರಬರ, ಅರ್ಜುನ ಬಂಡಗರ, ದಿಲೀಪ ಜಮಾದಾರ, ಫಾರೂಕ ಮೊಮಿನ, ಹಾಜಿಮುಲ್ಲಾ, ಜ್ಯೋತಿ ಕೆಂಪಟ್ಟಿ, ಸುನೀಲ ಜಾಧವ, ಸುಭಾಷ ಕೋಟಿವಾಲೆ, ಅಣ್ಣಾಸಾಹೇಬ ಸಮಾಜೆ, ಸಂತೋಷ ಸಾವಂತ, ದತ್ತಾ ಮೊರೆ, ಸುರೇಶ ಕಾಂಬಳೆ, ತನುಜಾ ಶಿಂಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.