ಬೆಳಗಾವಿ: ಧಾರವಾಡ ಸಮೀಪ ಬುಧವಾರ ಸಂಭವಿಸಿದ ಕಾರ್ ಅಪಘಾತದಲ್ಲಿ ಗಾಯಗೊಂಡ ಹುಕ್ಕೇರಿ ತಾಲ್ಲೂಕಿನ ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಇಲ್ಲಿನ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಆಸ್ಪತ್ರೆಗೆ ದೌಡಾಯಿಸಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಎದ್ದುಕುಳಿತ ಸ್ವಾಮೀಜಿ, ಸಚಿವ ಉಮೇಶ ಕತ್ತಿ ಅವರೊಂದಿಗೂ ಮೊಬೈಲ್ ಮೂಲಕ ಮಾತನಾಡಿ ಆರೋಗ್ಯವಾಗಿ ಇರುವುದಾಗಿ ತಿಳಿಸಿದರು.
ಶ್ರೀಗಳ ಮೊಣಕಾಲು, ಮೊಣಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೂ ಮುಂಜಾಗ್ರತಾ ಕ್ರಮವಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಕುರಿತು ಮಾಧ್ಯಮಗಳಿಗೆ ವಿಡಿಯೊ ಹೇಳಿಕೆ ನೀಡಿದ ಸ್ವಾಮೀಜಿ, ‘ವಾಹನ ಅಪಘಾತವಾದರೂ ಅದರಲ್ಲಿದ್ದ ಎಲ್ಲ ಐದೂ ಮಂದಿ ಸುರಕ್ಷಿತವಾಗಿದ್ದೇವೆ. ನಾನು ಕೂಡ ಆರೋಗ್ಯವಾಗಿದ್ದೇನೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.