ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಕೊಂಕಣ ಭಾಗದಲ್ಲಿ ಸತತ ವಾಗಿ ಮಳೆಯಾಗುತ್ತಿರುವುದರಿಂದ ತಾಲ್ಲೂಕಿನ ಎಲ್ಲ ಸೇತುವೆಗಳು ಎರಡನೇ ಬಾರಿ ಜಲಾವೃತಗೊಂಡಿವೆ. ಸೋಮವಾರ ಕಾರದಗಾ-ಭೋಜ ಸೇತುವೆಯೂ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ತಾಲ್ಲೂಕಿನ ಹುನ್ನರಗಿ ಗ್ರಾಮದ ಲಕ್ಷ್ಮೀ-ನಾರಾಯಣ ಮಂದಿರದಲ್ಲಿ ವೇದಗಂಗಾ ನದಿ ನೀರು ನುಗ್ಗಿದೆ.
ವೇದಗಂಗಾ ಮತ್ತು ದೂಧಗಂಗಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ ನೂರಾರು ಎಕರೆ ಹೊಲಗದ್ದೆಗಳಲ್ಲಿ ನೀರು ನುಸುಳಿ ರೈತರು ಅಪಾರ ಹಾನಿ ಎದುರಿಸುವ ಸಂಕಷ್ಟ ಬಂದೊದಗಿದೆ. ಹೊಲಗದ್ದೆಗಳಲ್ಲಿ ನೀರು ನಿಂತು ಕೆರೆಯಂತಾಗಿದೆ.
ಸ್ಥಳೀಯ ಲೋಕೋಪಯೋಗಿ ಇಲಾಖೆಯಲ್ಲಿ 39.2 ಮಿ.ಮೀ., ಎಆರ್ಎಸ್ನಲ್ಲಿ 40 ಮಿ.ಮೀ., ತಾಲ್ಲೂಕಿನ ಸೌಂದಲಗಾ ಗ್ರಾಮದಲ್ಲಿ 38.1 ಮಿ.ಮೀ. ಮತ್ತು ಗಳತಗಾ ಗ್ರಾಮದಲ್ಲಿ 30 ಮಿ.ಮೀ. ಮಳೆ ಪ್ರಮಾಣ ನೋಂದಾಯಿಸಲಾಗಿದೆ. ಕಳೆದ 24 ಗಂಟೆಯಲ್ಲಿ 147.3 ಮಿ.ಮೀ. ಸುರಿದಿದ್ದು ಇಲ್ಲಿಯವರೆಗೆ 1686.6 ಮಿ.ಮೀ. ಮಳೆ ಬಿದ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.