ADVERTISEMENT

ಕಳಪೆ ಕಾಮಗಾರಿಗೆ ತಡೆಯೊಡ್ಡಿ: ಸಾರ್ವಜನಿಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 17:19 IST
Last Updated 16 ಜುಲೈ 2021, 17:19 IST
ಮುಗಳಖೋಡದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ಪರಿಶೀಲಿಸಿ, ಸ್ಥಳೀಯರಿಂದ ಗುರುವಾರ ಮಾಹಿತಿ ಪಡೆದರು
ಮುಗಳಖೋಡದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ಪರಿಶೀಲಿಸಿ, ಸ್ಥಳೀಯರಿಂದ ಗುರುವಾರ ಮಾಹಿತಿ ಪಡೆದರು   

ಮುಗಳಖೋಡ (ಬೆಳಗಾವಿ ಜಿಲ್ಲೆ): ‘ಪಟ್ಟಣದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ಕಳಪೆ ಎಂದು ಕಂಡುಬಂದಲ್ಲಿ ಸಾರ್ವಜನಿಕರು ತಡೆ ನೀಡಬೇಕು. ಎಲ್ಲ ಕೆಲಸಗಳಿಗೂ ಅಡ್ಡಿಪಡಿಸಬಾರದು’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ಸಲಹೆ ನೀಡಿದರು.

‘ಪುರಸಭೆ ವತಿಯಿಂದ ಕೈಗೊಂಡಿರುವ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಂಡಿಲ್ಲ. ಗುಣಮಟ್ಟವೂ ಸರಿ ಇಲ್ಲ’ ಎಂಬ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.

‘ಜನರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಸೂಚಿಸಿದರು.

ADVERTISEMENT

ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ 15 ಮತ್ತು 16ನೇ ವಾರ್ಡ್‌ಗಳ ನಿವಾಸಿಗಳೊಂದಿಗೆ ಚರ್ಚಿಸಿದರು. ‘15 ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.

‘ನಗರೋತ್ಥಾನ ಯೋಜನೆಯಲ್ಲಿ ಶಾಮಾನಂದ ಮಠದ ಬಳಿ ಶೌಚಾಲಯವನ್ನು ತ್ವರಿತವಾಗಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಚರಂಡಿ ನೀರು ಕೆರೆಗೆ ಸೇರದಂತೆ ಕ್ರಮ ವಹಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಬಿ. ಡಂಬಳ ಅವರಿಗೆ ಸೂಚಿಸಿದರು.

ಎಇ ಎಂ.ಎಲ್. ಗಣಿ, ಎಇಇ ಪಿ.ಕೆ. ಸಿಂಧೂರೆ, ಆರ್.ಆರ್. ಚೌಗಲಾ, ರಾಜಶೇಖರ ಜಾಗನೂರ, ಮಹಾವೀರ ಕುರಣಿ, ರಾಮಣ್ಣ ಮುಧೋಳ, ಸುರೇಶ ಹೊಸಪೇಟಿ, ಹಣಮಂತ ಕುಲಿಗೋಡ ಲತಾ ಹುದ್ದಾರ, ಹಣಮಂತ ಕಲ್ಲೋಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.