ADVERTISEMENT

ವಿಧಾನಸೌಧ ಆವರಣದಲ್ಲಿ ಬಸವೇಶ್ವರ ಪ್ರತಿಮೆ: ಕೋರೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 11:33 IST
Last Updated 26 ಜೂನ್ 2021, 11:33 IST
ಪ್ರಭಾಕರ ಕೋರೆ
ಪ್ರಭಾಕರ ಕೋರೆ   

ಬೆಳಗಾವಿ: ‘ವಿಶ್ವ ಗುರು, ಮಹಾಮಾನವತಾವಾದಿ ಬಸವೇಶ್ವರರ (ಬಸವಣ್ಣ) ಪ್ರತಿಮೆಯನ್ನು ಕರ್ನಾಟಕದ ಶಕ್ತಿ ಕೇಂದ್ರ ಹಾಗೂ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸುವ ನಿರ್ಧಾರ ಸೂಕ್ತ ಮತ್ತು ಸ್ವಾಗತಾರ್ಹವಾದುದಾಗಿದೆ’ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದ್ದಾರೆ.

ಈ ಬಗ್ಗೆ ಶನಿವಾರ ಪ್ರಕಟಣೆ ನೀಡಿರುವ ಅವರು, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೈಗೊಂಡಿರುವ ಕ್ರಮವು ನಾಡಿನ ಬಸವಾಭಿಮಾನಿಗಳಿಗೆ ಹರ್ಷ ಉಂಟು ಮಾಡಿದೆ’ ಎಂದಿದ್ದಾರೆ.

‘12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಪಟದ ಮೂಲಕ ಎಲ್ಲ ಜನಾಂಗದ ಏಳಿಗೆಗ ಶ್ರಮಿಸಿದರು. ಸಮಾಜದಲ್ಲಿ ಬೇರು ಬಿಟ್ಟಿದ್ದ ವರ್ಣ-ಜಾತಿ–ವರ್ಗ-ಲಿಂಗ ಅಸಮಾನತೆಯನ್ನು ಕಿತ್ತು ಹಾಕಿ ಸಮಾನತೆಯ ಸಮಾಜ ರೂಪಿಸಲು ಶ್ರಮಿಸಿದರು. ವ್ಯಕ್ತಿ ಕಲ್ಯಾಣದೊಂದಿಗೆ ಸಮಾಜದ ಕಲ್ಯಾಣಕ್ಕೆ ಹೋರಾಡಿದರು. ಕಾಯಕ- ದಾಸೋಹದ ಮೂಲಕ ಸಮಾಜೋಧಾರ್ಮಿಕ ಚಳವಳಿ ಹುಟ್ಟು ಹಾಕಿದರು. ಅಂತಹ ಸಮಾಜ ಸುಧಾರಕ ಬಸವಣ್ಣ ಅವರನ್ನು ಪಡೆದ ಕರ್ನಾಟಕವೇ ಧನ್ಯ’ ಎಂದು ಹೇಳಿದ್ದಾರೆ.

ADVERTISEMENT

‘ಅವರ ವಿಚಾರಗಳಿಗೆ ಹಲವು ದೇಶಗಳು ಮಾರು ಹೋಗಿವೆ. ಲಂಡನ್‌ನ ಥೀಮ್ಸ್ ನದಿ ತೀರದಲ್ಲಿ ಬಸವಣ್ಣನ ಪ್ರತಿಮೆ ಅನಾವರಣಗೊಳಿಸಲಾಗಿದೆ. ನಮ್ಮ ಸಂಸತ್‌ ಭವನದ ಎದುರು ಅಶ್ವಾರೂಢ ಪ್ರತಿಮೆಯು ಸಮಾನತೆಯ ಧ್ಯೋತಕವಾಗಿದೆ. ಕೇಂದ್ರ ಸರ್ಕಾರವು ಬಸವಣ್ಣನವರ ವಚನಗಳನ್ನು 22 ಭಾಷೆಗಳಲ್ಲಿ ಪ್ರಕಟಿಸಿದೆ. ಹೀಗೆ ಕಾಲಕಾಲಕ್ಕೆ ಅವರ ಜೀವನ ಸಂದೇಶಗಳನ್ನು ವಿಶ್ವದ ಜನತೆಗೆ ಮುಟ್ಟಿಸುವ ಕೆಲಸ ಒಂದೆಡೆಯಾದರೆ, ಅವರ ಪ್ರತಿಮೆಗಳ ಅನಾವರಣ ಇಂದಿನ ಯುವಪೀಳಿಗೆಗೆ ಸ್ಫೂರ್ತಿಯ ಸೆಲೆ ಆಗುವುದರಲ್ಲಿ ಯಾವ ಸಂದೇಹವೂ ಇಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ವಿಧಾನಸೌಧ ಆವರಣದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಬೇಕು ಎನ್ನುವುದು ಬಹುದಿನಗಳ ಕನಸಾಗಿತ್ತು. ನನೆಗುದಿಗೆ ಬಿದ್ದಿತ್ತು. ಅದು ಯಡಿಯೂರಪ್ಪ ಅವರ ಇಚ್ಛಾಶಕ್ತಿಯಿಂದ ಈಗ ಚಾಲನೆ ಪಡೆದಿರುವುದು ಹೆಮ್ಮೆ ಮತ್ತು ಅಭಿಮಾನ ತಂದಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.