ADVERTISEMENT

31ರೊಳಗೆ ಪ್ರವಾಹ, ಅತಿವೃಷ್ಟಿ ಹಾನಿ ಸಮೀಕ್ಷಾ ವರದಿ ಸಿದ್ಧಪಡಿಸಿ

ಉಪವಿಭಾಗ ಮಟ್ಟದ ಅಧಿಕಾರಿಗಳ ಸಭೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 13:08 IST
Last Updated 18 ಸೆಪ್ಟೆಂಬರ್ 2020, 13:08 IST
ಬೈಲಹೊಂಗಲ ತಾಲ್ಲೂಕು ಪಂಚಾಯ್ತಿ ಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಧ್ಯಕ್ಷತೆಯಲ್ಲಿ ಶುಕ್ರವಾರ ಉಪವಿಭಾಗಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು 
ಬೈಲಹೊಂಗಲ ತಾಲ್ಲೂಕು ಪಂಚಾಯ್ತಿ ಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಧ್ಯಕ್ಷತೆಯಲ್ಲಿ ಶುಕ್ರವಾರ ಉಪವಿಭಾಗಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು    

ಬೈಲಹೊಂಗಲ: ‘ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸೆ.31 ರೊಳಗೆ ಡಾಟಾ ಎಂಟ್ರಿ ಕಾರ್ಯವನ್ನು ಮುಗಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಶುಕ್ರವಾರ ನಡೆದ ಉಪವಿಭಾಗದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೈಲಹೊಂಗಲ ಉಪವಿಭಾಗದಲ್ಲಿ ಬರುವ ಬೈಲಹೊಂಗಲ, ಕಿತ್ತೂರ, ಮೂಡಲಗಿ, ಉಮದುರ್ಗ, ಸವದತ್ತಿ ಹಾಗೂ ಗೋಕಾಕ 6 ತಾಲ್ಲೂಕುಗಳ ಪೈಕಿ 2020-21ನೇ ಸಾಲಿನಲ್ಲಿ ಒಟ್ಟು 133 ಎ ವರ್ಗದ, 17 ಬಿ ವರ್ಗದ ಹಾಗೂ 12.30 ಸಿ ವರ್ಗದ ಹೀಗೆ ಒಟ್ಟು 1,480 ಮನೆಗಳ ಹಾನಿಯಾಗಿದ್ದು, ಅವುಗಳ ಪೈಕಿ ಶೇ 70 ರಷ್ಟು ಹಾನಿ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ. ಇನ್ನುಳಿದ ಶೇ 30 ರಷ್ಟು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಜೀವಹಾನಿ, ಜಾನುವಾರು ಹಾನಿ, ಬೆಳೆ ಹಾನಿಯನ್ನು ಪರಿಶೀಲಿಸಿ ತಿಂಗಳಾಂತ್ಯದಲ್ಲಿ ಈ ಕಾರ್ಯ ಪೂರ್ಣಗೊಳಿಸಿ' ಎಂದು ತಿಳಿಸಿದರು.

ADVERTISEMENT

ಆರು ತಾಲ್ಲೂಕುಗಳ ಪಹಣಿ ಪ್ರಗತಿ ಪರಿಶೀಲಿಸಿ, ಪಹಣಿಯಲ್ಲಿ ಉಪವಿಭಾಗದಲ್ಲಿ ಬಾಕಿ ಇರುವ 95,146 ಪ್ರಕರಣಗಳನ್ನು ತಾಲ್ಲೂಕುವಾರು ಅವಧಿ ನಿಗದಿಪಡಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಉಪವಿಭಾಗದಲ್ಲಿ 498 ಗ್ರಾಮಗಳ ಪೈಕಿ 337 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಹೊಂದಿದ್ದು, ಇನ್ನುಳಿದ 161 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ, ಸ್ಮಶಾನ ಭೂಮಿಗೆ ಪೂರೈಸಲು, ಲಭ್ಯವಿಲ್ಲದೆ ಇದ್ದಲ್ಲಿ ಖಾಸಗಿ ಜಮೀನು ಖರೀದಿ ಮಾಡಲು ಖಾಸಗಿ ಜಮೀನಿನ ಮಾಲೀಕರು ಮುಂದೆ ಬಂದಲ್ಲಿ ನೇರ ಖರೀದಿ ಪ್ರಸ್ತಾವ ಸಲ್ಲಿಸಲು ನಿರ್ದೇಶನ ನೀಡಿದರು. ವಿವಿಧ ಪಿಂಚಣಿಗಳ ಯಾದಿಯನ್ನು ಗ್ರಾಮವಾರು ತಯಾರಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಭೂ ಮಾಪನ ಅಧಿಕಾರಿ ಮೋಹನ ಶಿವನ್ನನವರ, ಸೇರಿದಂತೆ ಆರು ತಾಲ್ಲೂಕುಗಳ ತಹಶೀಲ್ದಾರ್‌ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.