
ಬೆಳಗಾವಿ: ‘ಎಲ್ಲ ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠವಾದದ್ದು. ಹೀಗಾಗಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಹೇಳಿದರು.
ಆಂಜನೇಯ ನಗರ ಸರ್ಕಾರಿ ಶಾಲೆಯ 2022–23ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಲಾ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
‘ಸರ್ಕಾರಿ ಶಾಲೆಗಳ ಅಭಿವೃದ್ಧಿಯಿಂದ ಬಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ದೊರೆಯಲಿದೆ. ಅವರು ಪರಿವರ್ತನೆ ಹೊಂದಲು ದಾರಿಯಾಗುತ್ತದೆ. ಶಿಕ್ಷಣದ ಅಗತ್ಯ ಕುರಿತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಚ್ಚು ಒತ್ತು ನೀಡಿದ್ದರು. ಪಾಲಕರೂ ಅವರ ಆದರ್ಶ ಪಾಲಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು’ ಎಂದರು.
ನಗರಸೇವಕ ರಾಜಶೇಖರ ಡೋಣಿ, ಪತ್ರಕರ್ತ ಗೋಪಾಲ ಖಟಾವಕರ ಮಾತನಾಡಿದರು. ಸಾಬಣ್ಣ ತಳವಾರ, ಹಾಗೂ ಪ್ರಾದೇಶಿಕ ಆಯುಕ್ತರಾದ ಶೋಭಾ ಹಿರೇಮಠ ಅವರನ್ನು ಸತ್ಕರಿಸಲಾಯಿತು. ಮುಖ್ಯಶಿಕ್ಷಕಿ ಎಂ.ಎಂ. ಖೋದಾನಪುರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಬಿ.ಎಸ್. ಅವ್ವಕನವರ ನಿರೂಪಿಸಿದರು. ಶಿಕ್ಷಕಿ ಎಸ್.ಎಚ್. ಬೋಗಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.