ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಕೃಷ್ಣಾ ನದಿಯು ತುಂಬಿ ಹರಿಯುತ್ತಿದೆ. ಹೀಗಾಗಿ ಕೃಷ್ಣಾ ಹಾಗೂ ಉಪನದಿ ತೀರದ ಹತ್ತಾರು ದೇವಸ್ಥಾನ ಹಾಗೂ ದರ್ಗಾಗಳು ಜಲಾವೃತಗೊಂಡಿದ್ದು ಭಕ್ತರು-ಅರ್ಚಕರು ಪರದಾಡುವಂತಾಗಿದೆ.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕಲ್ಲೋಳ ಬಳಿಯ ಕೃಷ್ಣಾ ನದಿ ತೀರದ ದತ್ತಾತ್ರೇಯ ದೇವಾಲಯ, ಯಡೂರಿನ ವೀರಭದ್ರ ದೇವಸ್ಥಾನ, ಬಾವನ ಸೌದತ್ತಿಯ ಸುಗಂಧಾದೇವಿ ದೇವಸ್ಥಾನ, ಹಳೆ ದಿಗ್ಗೇವಾಡಿಯ ಗಂಗಾಮಾತಾ ದೇವಸ್ಥಾನ, ಚಂದೂರಿನ ಚಂದ್ರಲಿಂಗೇಶ್ವರ ದೇವಸ್ಥಾನ, ಕುಡಚಿಯ ಮಾಸಾಬ್ತಿ ದರ್ಗಾ, ಕರ್ನಾಟಕ-ಮಹಾರಾಷ್ಟ್ರ ಜನರ ಆರಾಧ್ಯದೈವವಾಗಿರುವ ಕೃಷ್ಣಾ ಹಾಗೂ ಪಂಚಗಂಗಾ ಸಂಗಮ ಸ್ಥಳ ನರಸಿಂಹವಾಡಿಯ ದತ್ತ ಮಂದಿರ ಮುಂತಾದವು ಕೃಷ್ಣಾ ನದಿ ನೀರಿನಿಂದ ಜಲಾವೃತಗೊಳ್ಳುವುದು ಸಾಮಾನ್ಯವಾಗಿದೆ.
ಕಾರದಗಾ ಗ್ರಾಮದ ಬಂಗಾಲಿಬಾಬಾ ದೇವಸ್ಥಾನ, ಯಕ್ಸಂಬಾ ಪಟ್ಟಣದ ಹೊರವಲಯದ ಕರ್ಲಹೊಂಡಲಿಂಗೇಶ್ವರ ದೇವಸ್ಥಾನ, ಮನಸೂರ ಪೀರ ದರ್ಗಾ, ಸದಲಗಾ ಪಟ್ಟಣದ ಹೊರ ವಲಯದ ಮಾರುತಿ ದೇವಸ್ಥಾನ, ವೇದಗಂಗಾ-ದೂಧಗಂಗಾ ಸಂಗಮ ಸ್ಥಳದಲ್ಲಿರುವ ಬಾರವಾಡದ ಸಂಗಮೇಶ್ವರ ದೇವಸ್ಥಾನಗಳು ಪ್ರತಿ ವರ್ಷವೂ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತವೆ.
ಕೃಷ್ಣಾ ಹಾಗೂ ಉಪನದಿಗಳು ಪ್ರತಿವರ್ಷ ಮಳೆಗಾಲದಲ್ಲಿ ಉಕ್ಕಿ ಹರಿಯುವುದರಿಂದ ನದಿ ತೀರದ ದೇಗುಲ-ದರ್ಗಾಗಳು ಜಲಾವೃತಗೊಳ್ಳುತ್ತವೆ. ಒಂದೊಮ್ಮೆ ಜಲಾವೃತಗೊಂಡರೆ ತೆರವುಗೊಳ್ಳಲು ಕನಿಷ್ಠ 8-15 ದಿನಗಳೇ ಬೇಕಾಗುತ್ತದೆ. ಒಮ್ಕೊಮ್ಮೆ ಒಂದು ತಿಂಗಳವಾದರೂ ನದಿ ನೀರಿನಿಂದ ತೆರವುಗೊಳ್ಳುವುದಿಲ್ಲ. ಹೀಗಾಗಿ ಪ್ರತಿದಿನ ದೇವಸ್ಥಾನದ ಪೂಜಾ ಕೈಂಕರ್ಯಗಳಿಗೆ ತೊಂದರೆಯಾಗುತ್ತದೆ.
ದೇಗುಲಗಳಿಗೆ ನದಿ ನೀರು ಜಲಾವೃತಗೊಳ್ಳುವ ಮೊದಲೇ ಆಯಾ ದೇವಸ್ಥಾನಗಳ ಅರ್ಚಕರು ದೇವರ ಮೂರ್ತಿ, ಪೂಜಾ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಾರೆ. ಸುರಕ್ಷಿತ ಸ್ಥಳದಲ್ಲಿಯೇ ದೇವರ ಮೂರ್ತಿಗಳನ್ನು ಇರಿಸಿ ಪೂಜೆ ಮಾಡುತ್ತಾರೆ. ಕೆಲವೊಮ್ಮೆ ಮೂರ್ತಿಗಳನ್ನು ತೆರವುಗೊಳಿಸಲು ಸಾಧ್ಯವಾಗದೇ ಇದ್ದಾಗ ನದಿ ತೀರಕ್ಕೆ ಪ್ರತಿ ದಿನ ಅರ್ಚಕರು ತೆರಳಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುತ್ತಾರೆ.
ಆಷಾಢ, ಶ್ರಾವಣ, ಭಾದ್ರಪದ ಮಾಸಗಳಲ್ಲಿ ಸಾಲು ಸಾಲು ಹಬ್ಬಗಳು ಬರುವುದರಿಂದ ಈ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಭಕ್ತರು ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಕೆಲವೊಂದು ದೇವಸ್ಥಾನಗಳನ್ನು ನದಿ ತೀರದಿಂದ ದೂರದಲ್ಲಿ ನಿರ್ಮಿಸಿದರೂ ನದಿ ಪಾತ್ರ ಮೀರಿ ಹರಿಯುವಾಗ ಹೊಸದಾಗಿ ನಿರ್ಮಿಸಿದ ದೇವಾಲಯಗಳೂ ಜಲದಿಗ್ಭಂಧನಕ್ಕೊಳಗಾಗದೇ ಬೇರೆ ದಾರಿಯೇ ಇಲ್ಲ ಎನ್ನುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.