ಸವದತ್ತಿ (ಬೆಳಗಾವಿ ಜಿಲ್ಲೆ): ಸಮೀಪದ, ಯರಗಟ್ಟಿ ತಾಲ್ಲೂಕಿನ ಮಾಡಮಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಮಳೆಯಿಂದಾಗಿ ಮನೆ ಕುಸಿದು ತಾಯಿ– ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ.
ಮಾಡಮಗೇರಿ ನಿವಾಸಿ ಯಲ್ಲವ್ವ ಮಹಾದೇವ ಬಾಗಿಲದ (40) ಹಾಗೂ ಅವರ ಐದು ವರ್ಷದ ಪುತ್ರ ಪ್ರಜ್ವಲ್ ಸಾವಿಗೀಡಾದವರು. ಮಹಿಳೆಯ ಇಬ್ಬರು ಸಂಬಂಧಿಕರ ಮೇಲೂ ಕಲ್ಲು– ಮಣ್ಣಿನ ಗೋಡೆ ಬಿದ್ದು ಗಾಯಗೊಂಡಿದ್ದಾರೆ.
ಉದ್ದವ್ವ ಬಾಗಿಲದ (38), ರೂಪಾ ಬಾಗಿಲದ (18) ಗಾಯಗೊಂಡಿದ್ದು, ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಸಂಜೆಯಿಂದ ನಿರಂತರ ಮಳೆ ಸುರಿದಿದೆ. ಕಲ್ಲು– ಮಣ್ಣಿನಿಂದ ನಿರ್ಮಿಸಿದ ಯಲ್ಲವ್ವ ಅವರ ಮನೆಯ ಗೋಡೆ ಹಾಗೂ ಚಾವಣಿ ನೀರಿನಿಂದ ತೋಯ್ದು ಏಕಾಏಕಿ ಕುಸಿದು ಬಿತ್ತು. ಅಡುಗೆ ಮನೆಯಲ್ಲಿದ್ದ ತಾಯಿ ಹಾಗೂ ಪುಟ್ಟ ಬಾಲಕ ಮಣ್ಣಿನ ಅವಶೇಷಗಳ ಅಡಿ ಸಿಲುಕಿ ಕೊನೆಯುಸಿರೆಳೆದರು.
ಮನೆ ಕುಸಿದ ತಕ್ಷಣ ಅಕ್ಕಪಕ್ಕದ ಜನ ಸಹಾಯಕ್ಕೆ ಧಾವಿಸಿದರು. ಅವಶೇಷಗಳ ಅಡಿ ಸಿಲುಕಿದ್ದವರನ್ನು ಹೊರತೆಗೆದರು. ಆದರೆ, ಅಷ್ಟರೊಳಗೆ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಹಶೀಲ್ದಾರ್ ಮಹಾಂತೇಶ ಮಠದ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಪಿಎಸ್ಐ ಬಸನಗೌಡ ನಿರ್ಲಿ, ಎಎಸ್ಐ ವೈ.ಎಂ. ಕಡಕೋಳ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.