ADVERTISEMENT

ಕಾಗವಾಡ: ಪ್ರವಾಹಕ್ಕೆ ನಲುಗಿದ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 15:56 IST
Last Updated 3 ಆಗಸ್ಟ್ 2024, 15:56 IST
ಕಾಗವಾಡ ತಾಲ್ಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ತೋಟಗಳಿಗೆ ನೀರು ನುಗ್ಗಿ‌ದ್ದು, ಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಜಾನವಾರುಗಳಿಗೆ ಆಶ್ರಯ ನೀಡಲಾಗಿದೆ
ಕಾಗವಾಡ ತಾಲ್ಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ತೋಟಗಳಿಗೆ ನೀರು ನುಗ್ಗಿ‌ದ್ದು, ಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಜಾನವಾರುಗಳಿಗೆ ಆಶ್ರಯ ನೀಡಲಾಗಿದೆ   

ಕಾಗವಾಡ: ಕಳೆದ ಕೆಲವು ದಿನಗಳಿಂದ ತಾಲ್ಲೂಕಿನ ಕೃಷ್ಣಾ ನದಿಯ ನೀರಿನ ಪ್ರಮಾಣ ಏರಿಕೆ ಆಗದೆ ಇತ್ತ ಇಳಿಕೆಯೂ ಆಗದೆ ಸ್ಥಿರವಾಗಿದ್ದು, ತೀರದ ಗ್ರಾಮಗಳಲ್ಲಿ ಪ್ರವಾಹದ ನೀರು ವಸತಿ ಪ್ರದೇಶಕ್ಕೆ ನುಗ್ಗಿದ ಪರಿಣಾಮ ನಲುಗಿದ್ದು, ಸಂತ್ರಸ್ತರು ತಾಲ್ಲೂಕು ಆಡಳಿತ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ಜಾನವಾರು ಸಮೇತ ಆಶ್ರಯ ಪಡೆದಿದ್ದಾರೆ.

ತಾಲ್ಲೂಕಿನ ಕೃಷ್ಣಾ ‌ನದಿಯ ನೀರಿನ ಮಟ್ಟ ಹೆಚ್ಚಾದರೆ ಅತಿ ಹೆಚ್ಚು ರಸ್ತೆಗಳು ಜಲಾವೃತ ಆಗುತ್ತವೆ. ಸದ್ಯ ತಾಲ್ಲೂಕಿನ 9 ರಸ್ತೆಗಳು ಜಲಾವೃತ ಆಗಿವೆ.‌ ₹5 ಕೋಟಿ ವೆಚ್ಚದಲ್ಲಿ ಎತ್ತರ ಹೆಚ್ಚಿಸಿ ನಿರ್ಮಿಸಿದ ಉಗಾರ ಖುರ್ದ ದಿಂದ ಉಗಾರ ಬುದ್ರುಕ್ ವರೆಗಿನ ಸೇತುವೆಯೂ ಜಲಾವೃತವಾಗಿರುವುದು ವಿಪರ್ಯಾಸ.

ತಾಲ್ಲೂಕು ಆಡಳಿತದಿಂದ ಜೂಗುಳ, ಬಣಜವಾಡ, ಕಾತ್ರಾಳ, ಕೃಷ್ಣಾ ಕಿತ್ತೂರು, ಗ್ರಾಮಗಳಲ್ಲಿ ಒಟ್ಟು ನಾಲ್ಕು ಕಾಳಜಿ ಕೇಂದ್ರಗಳನ್ನು ತೆರಯಲಾಗಿದೆ. ಅವುಗಳಲ್ಲಿ 664 ಜನ ಪ್ರವಾಹ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ತಾಲ್ಲೂಕಿನ ವಿವಿಧ ಗ್ರಾಮಗಳ ಒಟ್ಟು 2,524 ಜಾನವಾರುಗಳಿಗೆ ಅಗತ್ಯ ಮೇವು, ವಿತರಣೆ ಮಾಡಲಾಗುತ್ತಿದೆ. ತಾಲ್ಲೂಕಿನ ಸರಿ ಸುಮಾರು 6,700 ಹೆಕ್ಟೇರ್ ಪ್ರದೇಶದ ಜಮೀನಿನ ಬೆಳೆಗಳಿಗೆ ನದಿಯ ನೀರು ಆವರಿಸಿದೆ. ಪ್ರವಾಹ ಇಳಿದ ಕೂಡಲೇ ಸರ್ವೆ ಕಾರ್ಯ ಮಾಡಲಾಗುವುದು ಎಂದು ತಹಶೀಲ್ದಾರ್ ರಾಜೇಶ ಬುರ್ಲಿ ತಿಳಿಸಿದ್ದಾರೆ.

ADVERTISEMENT
ಕೃಷ್ಣಾ ನದಿಯ ಪ್ರವಾಹದ ನೀರು ಕೃಷ್ಣಾ ಕಿತ್ತೂರು ಗ್ರಾಮದ ಜಮೀನುಗಳನ್ನು ನುಗ್ಗಿ ಬೆಳೆ ನೀರಲ್ಲಿ ಮುಳುಗಡೆಯಾಗಿದೆ
ತಾಲ್ಲೂಕಿನಲ್ಲಿ ಒಟ್ಟು 16 ಕಾಳಜಿ ಕೇಂದ್ರ ಗುರುತಿಸಲಾಗಿದೆ. ಸದ್ಯ ನಾಲ್ಕು ಕೇಂದ್ರಗಳಲ್ಲಿ ಸಂತ್ರಸ್ತರು ಇದ್ದು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ನೀರಿನ ಮಟ್ಟ ಹೆಚ್ಚಳವಾದರೆ ಹೆಚ್ಚಿನ ಕಾಳಜಿ ಕೇಂದ್ರ ತೆರಯಲಾಗುವುದು
ರಾಜೇಶ ಬುರ್ಲಿ ತಹಶೀಲ್ದಾರ್ ಕಾಗವಾಡ
ಪ್ರವಾಹ ಬರುವುದು ಹಾನಿಯಾಗುವುದು ಪ್ರತಿ ವರ್ಷದ ಗೋಳಾಗಿದೆ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು
ಭರತ ಮೋಳೆ ಪ್ರವಾಹ ಸಂತ್ರಸ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.