ಉಗರಗೋಳ (ಬೆಳಗಾವಿ ಜಿಲ್ಲೆ): ಇಲ್ಲಿನ ಯಲ್ಲಮ್ಮನ ಗುಡ್ಡದಲ್ಲಿ ದೇವಸ್ಥಾನದೊಳಕ್ಕೆ ನುಗ್ಗಿದ್ದ ಮಳೆ ನೀರನ್ನು ಹೊರಹಾಕಿ ಶುಚಿಗೊಳಿಸಲಾಗಿದ್ದು ಶುಕ್ರವಾರ ಭಕ್ತರು ಎಂದಿನಂತೆ ದೇವಿಯ ದರ್ಶನ ಪಡೆದರು.
ಗುರುವಾರ ಸಂಜೆ ಸುರಿದ ಧಾರಾ ಕಾರ ಮಳೆಯಿಂದಾಗಿ ಸುತ್ತಲಿನ ಗುಡ್ಡದ ಪ್ರದೇಶದಿಂದ ಅಪಾರ ಪ್ರಮಾಣದ ನೀರು ಹರಿದುಬಂದಿತ್ತು. ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ನೀರು ದೇವಸ್ಥಾನದ ಪ್ರಾಂಗಣಕ್ಕೆ ನುಗ್ಗಿತ್ತು. ಇದರಿಂದ ಭಕ್ತರು ಪರದಾಡಿದ್ದರು.
ಎಚ್ಚೆತ್ತುಕೊಂಡ ಅಧಿಕಾರಿಗಳು ರಾತ್ರಿಯೇ ಚರಂಡಿ ಸ್ವಚ್ಛಗೊಳಿಸಿ, ನೀರು ಹರಿದು ಹೋಗಲು ಅನುವು ಮಾಡಿದರು. ನಸುಕಿನಿಂದಲೇ ಭಕ್ತರು ದೇವಿ ದರ್ಶನಕ್ಕೆ ಬಂದರು. ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.
‘ಪ್ರತಿ ಬಾರಿ ಮಳೆ ಬಂದಾಗಲೂ ಸುತ್ತಲಿನ ಬೆಟ್ಟದಿಂದ ನೀರು ಹರಿದು ಎಣ್ಣೆಹೊಂಡಕ್ಕೆ ಬರುತ್ತದೆ. ಹೊಂಡ ತುಂಬಿದ ಬಳಿಕ ರಸ್ತೆ ಹಾಗೂ ಚರಂಡಿಗಳ ಮೂಲಕ ಹರಿದು ಹೋಗುತ್ತದೆ. ಚರಂಡಿಗಳಲ್ಲಿ ತೆಂಗಿನಕಾಯಿ ಚಿಪ್ಪು, ಪ್ಲಾಸ್ಟಿಕ್ ಕಸ ತುಂಬಿದ್ದರಿಂದ ನೀರು ಹರಿದುಹೋಗದೇ, ದೇವಸ್ಥಾನದ ಪ್ರಾಂಗಣಕ್ಕೆ ನುಗ್ಗಿತು. ಪ್ರಾಂಗಣದಿಂದ ನೀರು ಹೊರಹೋಗಲು ಕಿಂಡಿಗಳನ್ನು ಮಾಡಲಾಗಿದೆ. ಭಕ್ತರು, ವ್ಯಾಪಾರಿಗಳಿಗೆ ತೊಂದರೆ ಆಗಿಲ್ಲ’ ಎಂದು ದೇವ ಸ್ಥಾನದಸೂಪರಿಂಟೆಂಡೆಂಟ್ ಅರವಿಂದ ಮಾಳಗೆ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.
ಚಿಕ್ಕಮಗಳೂರು ವರದಿ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಳೆಯಾಗಿದೆ. ನಗರದಲ್ಲಿ ಮಧ್ಯಾಹ್ನ ಮಳೆ ಸುರಿಯಿತು. ಗಿರಿಶ್ರೇಣಿ ಭಾಗ, ಅಲ್ಲಂಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಹಾಗೂ ಎನ್.ಆರ್.ಪುರ, ಆಲ್ದೂರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.