ADVERTISEMENT

ರಾಮದುರ್ಗ | ಕಬ್ಬು ಪೂರೈಸಿದ ಕೆಲವೇ ದಿನದಲ್ಲಿ ಬಿಲ್‌: ಶಿವಸುಬ್ರಹ್ಮಣ್ಯನ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 2:53 IST
Last Updated 16 ಅಕ್ಟೋಬರ್ 2025, 2:53 IST
ರಾಮದುರ್ಗ ತಾಲ್ಲೂಕಿನ ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಲೀಜ್‌ ಪಡೆದ ಇಐಡಿ ಪ್ಯಾರಿ ಕಂಪನಿ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಮಂಗಳವಾರ ಚಾಲನೆ ನೀಡಿದರು
ರಾಮದುರ್ಗ ತಾಲ್ಲೂಕಿನ ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಲೀಜ್‌ ಪಡೆದ ಇಐಡಿ ಪ್ಯಾರಿ ಕಂಪನಿ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಮಂಗಳವಾರ ಚಾಲನೆ ನೀಡಿದರು   

ರಾಮದುರ್ಗ: ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಲೀಜ್‌ ಪಡೆದಿರುವ ಇಐಡಿ ಪ್ಯಾರಿ ಕಂಪನಿಯು ಈ ವರ್ಷದಿಂದ 6.30 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಿವಸುಬ್ರಹ್ಮಣ್ಯನ್‌ ಹೇಳಿದರು.

ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 18 ನೇ ಸಾಲಿನ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಕಂಪನಿ ನೀಡಿರುವ ಗುರಿ 6.30 ಲಕ್ಷ ಮೆಟ್ರಿಕ್‌ ಟನ್‌. ಈ ವರ್ಷದಲ್ಲಿ ಉತ್ತಮ ಮಳೆ ಆಗಿರುವುದರಿಂದ ನೌಕರರು ಗುರಿಗಿಂತಲೂ 6.50 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ADVERTISEMENT

ರಾಮದುರ್ಗ ಭೂಮಿಯಲ್ಲಿ ಕಾರ್ಖಾನೆಗೆ ಅಗತ್ಯ ಇರುವ ಕಬ್ಬು ಬೆಳೆಗಿಂತ ಬೇರೆ ತಳಿಯ ಕಬ್ಬು ಬೆಳೆಯುತ್ತಾರೆ. ಆದರೆ ಈ ಹಂಗಾಮಿನಲ್ಲಿ ಎಲ್ಲ ರೀತಿಯ ತಳಿಯ ಕಬ್ಬು ಬೆಳೆ ತೆಗೆದುಕೊಳ್ಳುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ 30ಕ್ಕೂ ಹೆಚ್ಚಿನ ಕಾರ್ಖಾನೆಗಿಂತಲೂ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಅನುಕೂಲವಾಗುವ ಎಲ್ಲ ಯೋಜನೆಗಳನ್ನು ಜಾರಿ ಮಾಡಲಿದೆ. ಕಬ್ಬು ಪೂರೈಸಿದ ಕೆಲವೇ ದಿನಗಳಲ್ಲಿ ತಪ್ಪದೆ ಬಿಲ್‌ ಪೂರೈಕೆ ಮಾಡಲಾಗುವುದು. ಕಾರ್ಖಾನೆಗೆ ಇರುವ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಲಾಗುವುದು ಎಂದು ಹೇಳಿದರು.

ಕಾರ್ಖಾನೆಯ ಬಾಯ್ಲರ್‌ ಪ್ರದೀಪನ ಸೆ. 30ಕ್ಕೆ ಪ್ರಜ್ವಲಿಸಲಾಗಿದೆ. ಸಾಂಕೇತಿಕವಾಗಿ ಕಬ್ಬು ನುರಿಸುವ ಕಾರ್ಯಕ್ರಮ ಈಗ ನಡೆದಿದೆ. ಸರ್ಕಾರದ ಆದೇಶದ ಗಮನದಲ್ಲಿಟ್ಟುಕೊಂಡು ನವೆಂಬರ್‌ 1ರ ನಂತರ ಕಾರ್ಖಾನೆಯು ಅಧಿಕೃತವಾಗಿ ಆರಂಭಗೊಳ್ಳಲಿದೆ. ಕಾರ್ಖಾನೆ ಆರಂಭ ಇಲ್ಲದ ವೇಳೆ 8 ತಿಂಗಳ ಅವಧಿಯಲ್ಲಿ ಯಂತ್ರಗಳ ದುರಸ್ತಿ ಮತ್ತು ನವೀಕರಣ ಕಾಮಗಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಖಾನೆಯ ಪ್ರಾದೇಶಿಕ ವ್ಯವಸ್ಥಾಪಕ ಕೆ.ಎಚ್‌. ಬೂದಿ ಮಾತನಾಡಿ, ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಈ ಹಂಗಾಮಿನಲ್ಲಿ ಹೆಚ್ಚಿನ ಕಬ್ಬು ನುರಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಕಬ್ಬು ನುರಿಸುವ ಕಾಮಗಾರಿಗೆ ಚಾಲನೆ ನೀಡಿದರು.

‘ಆದಾಯ ವೆಚ್ಚದ ಮಾಹಿತಿ ನೀಡಿ’

ಕಾರ್ಖಾನೆಯನ್ನು ಪ್ಯಾರಿ ಕಂಪನಿಗೆ ಲೀಜ್‌ ಆಧಾರದಲ್ಲಿ ನೀಡಿರುವ ದಾಖಲೆಗಳನ್ನು ಹೊಸದಾಗಿ ಆಯ್ಕೆಗೊಂಡಿರುವ ನಿರ್ದೇಶಕರಿಗೆ ನೀಡಬೇಕು. ಕಾರ್ಖಾನೆಯಲ್ಲಿ ಬರುವ ಆದಾಯ ಮತ್ತು ವೆಚ್ಚವನ್ನು ನಿರ್ದೇಶಕರ ಗಮನಕ್ಕೆ ತರಬೇಕು ಎಂದು ನೂತನ ನಿರ್ದೇಶಕ ಗೋಪಾಲ ಸಂಶಿ ಕಾರ್ಯಕ್ರಮದ ಮಧ್ಯೆಯೇ ಆಕ್ಷೇಪಣೆ ಮಾಡಿದರು. ಎಲ್ಲ ನಿರ್ದೇಶಕರ ಸಭೆ ಕರೆದು ಕಾರ್ಖಾನೆಯ ಎಲ್ಲ ಮಾಹಿತಿಗಳನ್ನು ನೀಡುವ ತನಕ ಕಬ್ಬು ನುರಿಸುವ ಕಾರ್ಯವನ್ನು ತಡೆ ಹಿಡಿಯಬೇಕು. ನೂತನ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಖಾನೆ ಮುಂದುವರೆಸಿಕೊಂಡು ಹೋಗಬೇಕು. ಮುಂಚಿನಂತೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.