ಬೆಳಗಾವಿ: ರಾಜಕೀಯವಾಗಿ ಉತ್ತರ–ದಕ್ಷಿಣ ದ್ರುವದಲ್ಲಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿನ ಡಿಸಿಸಿ ಬ್ಯಾಂಕ್ ಚುನಾವಣೆಯ ವಿಷಯದಲ್ಲಿ ಹಲವು ವರ್ಷಗಳ ನಂತರ ಶನಿವಾರ ಒಟ್ಟಾಗಿ ಕಾಣಿಸಿಕೊಡರು.
ಡಿಸಿಸಿ ಬ್ಯಾಂಕ್ನಲ್ಲಿ ಮುಖಾಮುಖಿಯಾದ ಇಬ್ಬರೂ ಒಂದೇ ಸೋಪಾದಲ್ಲಿ ಕುಳಿತುಕೊಂಡು ಕೆಲಕಾಲ ಮಾತುಕತೆ ನಡೆಸಿದ್ದು ಗಮನಸೆಳೆಯಿತು. ಈ ಇಬ್ಬರೂ ನಾಯಕರು ಒಂದೇ ವೇದಿಕೆಗೆ ಬರಬೇಕು ಮತ್ತು ವೈಮನಸ್ಸು ಮರೆತು ಒಂದಾಗಬೇಕು ಎಂದು ಬಿಜೆಪಿ ವರಿಷ್ಠರು ಈಚೆಗೆ ಸೂಚಿಸಿದ್ದರು. ಅದರಂತೆ ಇಬ್ಬರೂಜೊತೆಯಾಗಿ ಕಾಣಿಸಿಕೊಂಡರು.
ಕಾಂಗ್ರೆಸ್ನಲ್ಲಿದ್ದಾಗ ಅಥಣಿ ಕ್ಷೇತ್ರದಿಂದ ಮಹೇಶ ಕುಮಠಳ್ಳಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದ ದಿನಗಳಿಂದಲೂ ರಮೇಶ ವಿರುದ್ಧ ಸವದಿ ಮುನಿಸಿಕೊಂಡಿದ್ದರು. ರಮೇಶ ಬಿಜೆಪಿಗೆ ಸೇರಿದ್ದರೂ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ, ಹಳೆ ವೈಷಮ್ಯ ಮರೆತಿರುವ ಸಂದೇಶ ರವಾನಿಸಿದ್ದಾರೆ. ‘ನಾವಿಬ್ಬರೂ ಹಿಂದಿನಿಂದಲೂ ಒಂದೇ ಆಗಿದ್ದೆವು’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಶ್ರಮಿಸಬೇಕು ಎಂದು ಪಕ್ಷದ ವರಿಷ್ಠರು ಜಿಲ್ಲೆಯ ಬಿಜೆಪಿ ನಾಯಕರಿಗೆ ಸೂಚಿಸಿದ್ದರು. ಆದರೆ, 16 ನಿರ್ದೇಶಕ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಮಾತ್ರ ಅವಿರೋಧ ಆಯ್ಕೆ ಆಗುವಂತೆ ನೋಡಿಕೊಳ್ಳುವಲ್ಲಿ ಮುಖಂಡರು ಯಶಸ್ವಿಯಾಗಿದ್ದಾರಷ್ಟೆ. ಮೂರು ಸ್ಥಾನಗಳಿಗೆ ನ. 6ರಂದು ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.