ಬೆಳಗಾವಿ: ‘ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯುಮಾರ್ಚ್ನಿಂದ ಹಮ್ಮಿಕೊಂಡಿರುವ ಹಸಿದವರತ್ತ ನಮ್ಮ ಚಿತ್ತ ಅಭಿಯಾನವು ಸಂಕಷ್ಟದಲ್ಲಿರುವ ಕುಟುಂಬಗಳ ಹಸಿವನ್ನು ನೀಗಿಸಿದೆ. ರಾಜ್ಯದಲ್ಲಿಯೇ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ’ ಎಂದು ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಾಸೂರು ತಿಪ್ಪೇಸ್ವಾಮಿ ಹೇಳಿದರು.
ಇಲ್ಲಿನ ಆಂಜನೇಯ ನಗರದಲ್ಲಿ ಬುಧವಾರ ಕನ್ನಡ ಕ್ರಿಯಾ ಸಮಿತಿಯು ಆಯೋಜಿಸಿದ್ದ ಆಹಾರ ಧಾನ್ಯ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಲಾಕ್ಡೌನ್ ಸಮಯದಲ್ಲಿ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ನಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಬಾರದ ಸಮಯದಲ್ಲಿ ಕ್ರಿಯಾ ಸಮಿತಿಯವರು ಆಹಾರ ಧಾನ್ಯವನ್ನು ದಾನಿಗಳಿಂದ ಸಂಗ್ರಹಿಸಿ ಹಸಿದವರಿಗೆ ಹಂಚಿದ್ದು ದಾಖಲೆಯಾಗಿ ಉಳಿಯಲಿದೆ’ ಎಂದರು.
ಕರವೇ ರಾಜ್ಯ ಘಟಕದ ಸಂಚಾಲಕ ಮಹಾದೇವ ತಳವಾರ, ‘ಈಭಿಯಾನವು ಕನ್ನಡ ಸಂಘಟನೆಗಳಿಗೆ ಒಂದು ಮಾದರಿ ಹಾಗೂ ದಾರಿದೀಪ’ ಎಂದು ಶ್ಲಾಘಿಸಿದರು.
ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ‘ಮಾರ್ಚ್ 23ರಂದು ಆರಂಭವಾದ ಈ ಅಭಿಯಾನವು ಜೂನ್ 5ಕ್ಕೆ 75 ದಿನಗಳನ್ನು ಪೂರೈಸುತ್ತದೆ. ಅಭಿಯಾನ ನಿಲ್ಲಿಸಬೇಕೋ, ಮುಂದುವರಿಸಬೇಕೋ ಎನ್ನುವ ಗೊಂದಲದಲ್ಲಿದ್ದೇವೆ’ ಎಂದರು.
ಮುಖಂಡ ರಾಜಶೇಖರ ಭಾವಿಕಟ್ಟಿ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಶಂಕರ ಬಾಗೇವಾಡಿ, ಕನ್ನಡ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೋಪಾಲ ಖಟಾವಕರ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.