ಬೆಳಗಾವಿ: ಇಲ್ಲಿನ ವಿಪ್ರ ಸಹಾಯ ವೇದಿಕೆಯವರು ಜಿಲ್ಲಾ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಬಡ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ವಿತರಿಸಿದರು.
ಚಿದಂಬರ ನಗರ ದೇವಸ್ಥಾನದಲ್ಲಿ ಕಾರ್ಯಕ್ರಮಕ್ಕೆ ವಕೀಲ ಎಸ್.ಎಂ. ಕುಲಕರ್ಣಿ ಚಾಲನೆ ನೀಡಿದರು.
ಮುಖಂಡ ಅನಿಲ ಪೋತದಾರ ಮಾತನಾಡಿ, ‘ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ಅನ್ನದಾನಕ್ಕೆ ಸಹಾಯ ಮಾಡುವ ಜೊತೆಗೆ ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವಾಗುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ’ ಎಂದು ತಿಳಿಸಿದರು.
‘ನೂರು ದಿನಸಿ ಕಿಟ್ಗಳನ್ನು ಭಾಗ್ಯನಗರ, ಅನಗೋಳ, ಶಹಾಪುರ ಮತ್ತು ವಡಗಾವಿ ಭಾಗದ ಕುಟುಂಬಗಳಿಗೆ ವಿತರಿಸಲಾಗಿದೆ. ಈ ಸೇವೆಗಾಗಿ ದಾನಿಗಳು ₹ 2.25 ಲಕ್ಷ ನೀಡಿದ್ದಾರೆ. ₹ 1,500 ಮೊತ್ತದಲ್ಲಿ ಕಿಟ್ ಸಿದ್ಧಪಡಿಸಲಾಗಿದೆ’ ಎಂದು ಸಂಚಾಲಕ ಜಯತೀರ್ಥ ಸವದತ್ತಿ ಹೇಳಿದರು.
ಸದಸ್ಯರಾದ ನರಸಿಂಹ ಸವದತ್ತಿ, ಆನಂದ ಗಲಗಲಿ, ಸುನೀಲ ದೇಶಪಾಂಡೆ, ಪವನ ದೇಶಪಾಂಡೆ, ಭೀಮಸೇನ ಮಿರ್ಜಿ, ಅಚ್ಚುತ ಪ್ರಯಾಗ, ಸುನೀಲ ಯಾರ್ದಿ, ರಾಜು ಜೋಶಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.