ADVERTISEMENT

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿ ಅಂತ್ಯಕ್ರಿಯೆಗೆ ನಿವಾಸಿಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 15:12 IST
Last Updated 20 ಸೆಪ್ಟೆಂಬರ್ 2020, 15:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಳಗಾವಿ: ಇಲ್ಲಿನ ಸದಾಶಿವ ನಗರದ ಲಿಂಗಾಯತ ರುದ್ರಭೂಮಿಯಲ್ಲಿ ಕೋವಿಡ್–19ನಿಂದ ಮೃತರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಎಂದು ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿ, ಗುಂಡಿ ತೋಡಲು ಜೆಸಿಬಿಯೊಂದಿಗೆ ಬಂದಿದ್ದ ಕುಟುಂಬದವರನ್ನು ಮತ್ತು ಪಾಲಿಕೆ ಸಿಬ್ಬಂದಿಯನ್ನು ವಾಪಸ್‌ ಕಳುಹಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲು ಅವರು ಬಂದಿದ್ದರು. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಮಾಜಸೇವಕಿ ಸರಳಾ ಹೆರೇಕರ್‌ ಅವರಿಗೆ ವಿಷಯ ತಿಳಿಸಿದ್ದರು. ಅವರು ಬಂದ ಬಳಿಕ ನಿವಾಸಿಗಳು, ಅಂತ್ಯಕ್ರಿಯೆಗೆ ಪ್ರತಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ. ಅಲ್ಲಿಂದ ವಾಹನ ಹಾಗೂ ಕುಟುಂಬದವರನ್ನು ವಾಪಸ್‌ ಕಳುಹಿಸಿದರು ಎಂದು ತಿಳಿದುಬಂದಿದೆ.

‘ಅಕ್ಕಪಕ್ಕದಲ್ಲಿಯೇ ಎರಡು ಸ್ಮಶಾನಗಳಿವೆ. ಮೃತ ವ್ಯಕ್ತಿಯ ಕುಟುಂಬದವರು ಮಾಹಿತಿ ಕೊರತೆಯಿಂದಾಗಿ ಆ ರುದ್ರಭೂಮಿಗೆ ಹೋಗಿದ್ದಾರೆ. ಇದರಿಂದ ಗೊಂದಲ ಉಂಟಾಗಿತ್ತು. ಆಸ್ಪತ್ರೆಯಿಂದ ಸ್ಥಳಕ್ಕೆ ಮೃತದೇಹ ತಂದಿರಲಿಲ್ಲ. ಗುಂಡಿ ತೆಗೆದು ಸಿದ್ಧತೆ ಮಾಡಿಕೊಳ್ಳಲು ಅವರು ಬಂದಿದ್ದರು. ವಿಷಯ ತಿಳಿದ ಬಳಿಕ ಸಮೀಪದ ಇನ್ನೊಂದು ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಪಾಲಿಕೆಯಿಂದ ವ್ಯವಸ್ಥೆ ಮಾಡಿಕೊಡಲಾಯಿತು’ ಎಂದು ಮಹಾನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.