ಚಿಕ್ಕೋಡಿ: ತಿಂಗಳಿಂದ ಚುನಾವಣೆ ಪ್ರಚಾರದ ಭರಾಟೆಯಲ್ಲಿ ತಲ್ಲೀನರಾಗಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಾದ ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ ಮತ್ತು ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಬುಧವಾರ ಬೆಳಿಗ್ಗೆ ಕುಟುಂಬದ ಸದಸ್ಯರೊಂದಿಗೆ ಕೆಲ ಹೊತ್ತು ಕಾಲ ಕಳೆದರು. ನಂತರ ಕಾರ್ಯಕರ್ತರೊಂದಿಗೆ ಗಳಿಸಿರಬಹುದಾದ ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದರು.
ಕಾವೇರಿದ್ದ ಚುನಾವಣಾ ಕಣ ಮಂಗಳವಾರ ನಡೆದ ಮತದಾನದ ನಂತರ ತಣ್ಣಗಾಗಿದೆ. ಆರೋಪ–ಪ್ರತ್ಯಾರೋಪ, ಮತಬೇಟೆಗಾಗಿ ನಾನಾ ಕಸರತ್ತಿನಲ್ಲಿ ತೊಡಗಿದ್ದ ಅಭ್ಯರ್ಥಿಗಳು ಮತ್ತು ವಿವಿಧ ಪಕ್ಷಗಳ ಕೆಲ ಪ್ರಮುಖರು ಬುಧವಾರ ಸೋಲು–ಗೆಲುವಿನ ಲೆಕ್ಕಾಚಾರಗಳಲ್ಲಿ ತೊಡಗಿದ್ದರೆ, ಕೆಲವರು ವಿಶ್ರಾಂತಿಯ ಮೊರೆ ಹೋದರು.
ಅಭ್ಯರ್ಥಿಗಳು ಮತ್ತು ವಿವಿಧ ಪಕ್ಷಗಳ ಮುಖಂಡರು ಮತದಾನ ನಂತರದ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ. ಬೂತ್ಮಟ್ಟದಿಂದ ಹಿಡಿದು ವಿಧಾನಸಭೆ ಕ್ಷೇತ್ರಗಳಲ್ಲಿ ಆಗಿರುವ ಮತದಾನ ಪ್ರಮಾಣ ಆಧರಿಸಿ ಪಕ್ಷದ ಅಭ್ಯರ್ಥಿಗಳ ಭವಿಷ್ಯದ ಕುರಿತು ಗುಣಾಕಾರ–ಭಾಗಾಕಾರ ಮಾಡುತ್ತಿದ್ದಾರೆ.
ಸಂಸದ ಪ್ರಕಾಶ ಹುಕ್ಕೇರಿ 72ನೇ ಹರೆಯದಲ್ಲೂ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೂ ದಣಿವರಿಯದೇ ಬುಧವಾರ ಬೆಳಿಗ್ಗೆ ಎಂದಿನಂತೆ ಕಾರ್ಯಕರ್ತರೊಂದಿಗೆ ಕಾಲ ಕಳೆದರು. ಸ್ವಗ್ರಾಮ ಯಕ್ಸಂಬಾದಲ್ಲಿ ಬೆಳಿಗ್ಗೆಯಿಂದಲೇ ಸಮಾಲೋಚನೆಯಲ್ಲಿ ತೊಡಗಿದ್ದರು. ವಿವಿಧೆಡೆಯಿಂದ ತಮ್ಮನ್ನು ಭೇಟಿಯಾಗಲು ಬಂದ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ, ಆಯಾ ಭಾಗಗಳಲ್ಲಿ ಪಕ್ಷದ ಪರ ಯಾವ ರೀತಿಯಲ್ಲಿ ಮತದಾನವಾಗಿ ಎಂಬ ಮಾಹಿತಿಯನ್ನೂ ಸಂಗ್ರಹಿಸಿದರು.
ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಕೂಡ ಯಕ್ಸಂಬಾದ ಫಾರ್ಮ್ಹೌಸ್ನಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿದ್ದರು. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆದರು. ಬಳಿಕ ಮನೆ ಆವರಣದಲ್ಲಿ ಸಾಕು ಪ್ರಾಣಿಗಳೊಂದಿಗೆ ಕೆಲ ಹೊತ್ತು ಕಳೆದರು. ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಅವರಿಗೆ ಅಭಿನಂದನೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.