ADVERTISEMENT

ವೇತನಕ್ಕಾಗಿ ಪೌರಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 14:27 IST
Last Updated 13 ಆಗಸ್ಟ್ 2019, 14:27 IST

ಬೆಳಗಾವಿ: ವೇತನ ನೀಡುವಂತೆ ಆಗ್ರಹಿಸಿ ಪೌರಕಾರ್ಮಿಕರು ಇಲ್ಲಿನ ನಗರಪಾಲಿಕೆ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ನಮಗೆ ಮೇ ತಿಂಗಳಿಂದಲೂ ವೇತನ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಧಾರಾಕಾರ ಮಳೆಯ ನಡುವೆಯೂ ರಜೆ ತೆಗೆದುಕೊಳ್ಳದೇ ತ್ಯಾಜ್ಯ ವಿಲೇವಾರಿ ಕೆಲಸ ಮಾಡಿದ್ದೇವೆ. ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಶ್ರಮಿಸಿದ್ದೇವೆ. ಆದರೂ ವೇತನ ಸಿಕ್ಕಿಲ್ಲ. ಇದರಿಂದಾಗಿ ಮನೆಗಳಿಗೆ ಬಾಡಿಗೆ ಕಟ್ಟುವುದಕ್ಕೂ ತೊಂದರೆಯಾಗಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು ಸಕಾಲದಲ್ಲಿ ಹಣ ದೊರೆಯುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಎಲ್ಲರೂ ನೆರೆ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದುದು, ಲೆಕ್ಕಾಧಿಕಾರಿ ವರ್ಗಾವಣೆ, ಅನುದಾನದ ಕೊರತೆ ಹಾಗೂ ತಾಂತ್ರಿಕ ತೊಂದರೆಯಿಂದ ವೇತನ ಬಿಡುಗಡೆಯಲ್ಲಿ ವಿಳಂಬವಾಗಿದೆ. ಮೇ ತಿಂಗಳ ವೇತನವನ್ನು ಮೂರ್ನಾಲ್ಕು ದಿನಗಳಲ್ಲಿ ಮತ್ತು ಜೂನ್‌ ಸಂಬಳವನ್ನು ವಾರದೊಳಗೆ ಕೊಡುತ್ತೇವೆ. ಸಹಕರಿಸಬೇಕು’ ಎಂದು ನಾಡಗೌಡ ಭರವಸೆ ನೀಡಿದರು. ನಂತರ ಪೌರಕಾರ್ಮಿಕರು ಪ್ರತಿಭಟನೆ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.