ADVERTISEMENT

ಬೆಳಗಾವಿ: ವಕೀಲ ಸಂತೋಷ ಪಾಟೀಲ ಹತ್ಯೆ; 8 ಆರೋಪಿಗಳ ಬಂಧನ

ಆಸ್ತಿ ಕಲಹ ಕೊಲೆಯಲ್ಲಿ ಅವಸಾನ, ಸುಪಾರಿ‍ ಪಡೆದು ಕೊಲೆ ಮಾಡಿದ ಆರೋಪ, ವಕೀಲರಿಂದಲೇ ವಕೀಲನ ಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 14:50 IST
Last Updated 7 ಜುಲೈ 2025, 14:50 IST
<div class="paragraphs"><p>ಡಾ.ಭೀಮಾಶಂಕರ ಗುಳೇದ</p></div>

ಡಾ.ಭೀಮಾಶಂಕರ ಗುಳೇದ

   

ಬೆಳಗಾವಿ: ‘ಜಮೀನಿನ ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಕೀಲ ಸಂತೋಷ ಪಾಟೀಲ ಹತ್ಯೆಯಾಗಿದ್ದು, ಈವರೆಗೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಪರಾರಿಯಾದ ಇಬ್ಬರ ಪತ್ತೆಗೆ ಜಾಲ ಬೀಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ‘ರಾಯಬಾಗ ತಾಲ್ಲೂಕಿನ ಬಸ್ತವಾಡದ ಶಿವಗೌಡ ಬಸಗೌಡ ಪಾಟೀಲ, ಭರತ ಕೋಳಿ, ಬಿರನಾಳದ ಕಿರಣ ಕೆಂಪವಾಡೆ, ಗೋಕಾಕ ತಾಲ್ಲೂಕಿನ ಗುಜನಾಳದ ಉದಯ ಮುಶೆನ್ನವರ, ಬೈಲಹೊಂಗಲ ತಾಲ್ಲೂಕಿನ ವಣ್ಣೂರಿನ ಸಂಜಯಕುಮಾರ ಹಳಬನ್ನವರ, ಗಜಮನಾಳದ ರಾಮು ದಂಡಾಪುರೆ, ಬೆಳಗಾವಿ ತಾಲ್ಲೂಕಿನ ಚಂದೂರಿನ ಸುರೇಶ ನಂದಿ, ಹೊನ್ನಿಹಾಳದ ಮಂಜುನಾಥ ತಳವಾರ ಬಂಧಿತರು. ಪರಾರಿಯಾಗಿರುವ ರಾಯಬಾಗ ತಾಲ್ಲೂಕಿನ ಅಳಗವಾಡಿಯ ಮಹಾವೀರ ಹಂಜೆ, ಹೊನ್ನಿಹಾಳದ ನಾಗರಾಜ ನಾಯಕ ಬಂಧನಕ್ಕೆ ಜಾಲ ಬೀಸಲಾಗಿದೆ’ ಎಂದರು.

ADVERTISEMENT

‘ಏಪ್ರಿಲ್‌ 29ರಂದು ಸವಸುದ್ದಿಯಿಂದ ರಾಯಬಾಗದ ನ್ಯಾಯಾಲಯಕ್ಕೆ ಬರುತ್ತಿದ್ದ ಸಂತೋಷ ಅವರನ್ನು ಕಾರಿನಲ್ಲಿ ಬಂದ ಕೆಲವು ಆರೋಪಿಗಳು ಅಡ್ಡಗಟ್ಟಿ, ಅಪಹರಿಸಿಕೊಂಡು ಹೋಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಸಾಕ್ಷ್ಯ ನಾಶಕ್ಕಾಗಿ ಪೆಟ್ರೋಲ್‌ನಿಂದ ಮೃತದೇಹ ಸುಟ್ಟಿದ್ದರು’ ಎಂದರು.

‘ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರು ಉದಯಕುಮಾರ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾಗಿದ್ದ ಸ್ಥಳದಲ್ಲಿ ಸಿಕ್ಕಿದ್ದ ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ, ಅವು ಸಂತೋಷ ಅವರ ಮೂಳೆಗಳೇ ಎಂದು ವರದಿ ಬಂದಿದೆ’ ಎಂದು ತಿಳಿಸಿದರು.

‘ಕೃತ್ಯಕ್ಕೆ ಉಪಯೋಗಿಸಿದ ಕಾರು, ಆಯುಧಗಳು, ಆರೋಪಿಗಳ ಮೊಬೈಲ್‌ಗಳು, ದ್ವಿಚಕ್ರ ವಾಹನಗಳು ಮತ್ತು ಸುಪಾರಿ ಪಡೆದುಕೊಂಡಿದ್ದ ಹಣ ವಶಕ್ಕೆ ಪಡೆಯಲಾಗಿದೆ’ ಎಂದು ವಿವರಿಸಿದರು.

‘ಸುಶಿಕ್ಷಿತ ವಕೀಲರೇ ಸೇರಿಕೊಂಡು ಮತ್ತೊಬ್ಬ ವಕೀಲನ ಹತ್ಯೆ ಮಾಡಿದ್ದು ದುರ್ದೈವದ ಸಂಗತಿ’ ಎಂದರು.

‘₹14 ಲಕ್ಷಕ್ಕೆ ಸುಪಾರಿ’

‘ಶಿವಗೌಡ ಪಾಟೀಲ ಮತ್ತು ಸಂತೋಷ ಪಾಟೀಲ ಇಬ್ಬರೂ ವಕೀಲರಿದ್ದು, ರಾಯಬಾಗದಲ್ಲಿ ಇರುವ 1 ಎಕರೆ, 4 ಗುಂಟೆ ಜಮೀನಿನ ವಿಚಾರವಾಗಿ ಇಬ್ಬರ ಮಧ್ಯೆ ವಿವಾದವಿತ್ತು. ಸಂತೋಷ ಪಾಟೀಲ ಇದೇ ವರ್ಷ ಜನವರಿಯಲ್ಲಿ ಶಿವಗೌಡ ವಿರುದ್ಧ ರಾಯಬಾಗ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿದ್ದರು. ಇದರಿಂದ ಸಿಟ್ಟಾದ ಶಿವಗೌಡ ತನ್ನ ಕಿರಿಯ ವಕೀಲರಾದ ಭರತ, ಕಿರಣ, ಮಹಾವೀರ ಜತೆ ಸೇರಿಕೊಂಡು, ಉಳಿದ ಆರೋಪಿಗಳ ಮೂಲಕ ಸಂತೋಷ ಅಪಹರಿಸಿಕೊಂಡು ಹೋಗಿ ಹತ್ಯೆ ಮಾಡಿಸಿದ್ದಾನೆ. ಈ ಕೊಲೆ ಮಾಡಲು ಆರೋಪಿಗಳಿಗೆ ₹14 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು. ಈ ಪೈಕಿ ಈಗಾಗಲೇ ₹11 ಲಕ್ಷ ಕೊಡಲಾಗಿತ್ತು’ ಎಂದು ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.