ADVERTISEMENT

’ಮಕ್ಕಳಿಗೆ ದಾರ್ಶನಿಕರ ಬಗ್ಗೆ ತಿಳಿಸಿ‘

ಸರ್ವಜ್ಞ ಜಯಂತಿ ಆಚರಣೆಯಲ್ಲಿ ಸಚಿವ ಸುರೇಶ ಅಂಗಡಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST
ಬೆಳಗಾವಿಯಲ್ಲಿ ಗುರುವಾರ ಸರ್ವಜ್ಞ ಜಯಂತಿ ಆಚರಣೆ ಅಂಗವಾಗಿ ನಡೆದ ಭಾವಚಿತ್ರದ ಮೆರವಣಿಗೆಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಗುರುವಾರ ಸರ್ವಜ್ಞ ಜಯಂತಿ ಆಚರಣೆ ಅಂಗವಾಗಿ ನಡೆದ ಭಾವಚಿತ್ರದ ಮೆರವಣಿಗೆಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಉದ್ಘಾಟಿಸಿದರು   

ಬೆಳಗಾವಿ: ‘ಮಕ್ಕಳು ಹಾಗೂ ಯುವಜನರಿಗೆ ಸರ್ವಜ್ಞ, ಡಾ.ಬಿ.ಆರ್‌. ಅಂಬೇಡ್ಕರ್, ಬಸವಣ್ಣನ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿ ಗುರುವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ವಜ್ಞರು ಸಂಸ್ಕೃತ ಭಾಷೆ ಕಲಿಯದೇ ಕನ್ನಡವನ್ನು ಕಲಿತು ವಚನ ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಸಾರಿದ ಮಹಾನ್ ಸಂತಕವಿ. ವಚನಗಳನ್ನು ಮತ್ತು ಅದರ ಸಾರಾಂಶವನ್ನು ಯುವ ಪೀಳಿಗೆಗೆ ತಲುಪಿಸಬೇಕು. ಸರ್ವಜ್ಞನ ರಚನೆಗಳನ್ನು ಇಡೀ ಜಗತ್ತಿಗೆ ಪರಿಚಯ ಮಾಡಿಕೊಡಬೇಕು’ ಎಂದು ಆಶಿಸಿದರು.

ADVERTISEMENT

ಉಪನ್ಯಾಸ ನೀಡಿದ ಡಾ.ಐ.ಎಸ್. ಕುಂಬಾರ, ‘ಜನರಿಗೆ ಜೀವನದ ಬಗ್ಗೆ ತಮ್ಮ ವಚನಗಳ ಮೂಲಕ ಮಾರ್ಗದರ್ಶನ ನೀಡಿದ ಸರ್ವಜ್ಞ ಸಂತ ಕವಿ, ದಾರ್ಶನಿಕ ಹಾಗೂ ವಿಶ್ವಕವಿ. ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು ಎಂದರ್ಥ. ಕುಂಬಾರ ಸಮಾಜದ ಆದರ್ಶ ಕಾಯಕವಾದಿ ಮತ್ತು ಸಮಾಜದಲ್ಲಿನ ಡೊಂಕುಗಳನ್ನು ತಿದ್ದಿದವರು’ ಎಂದು ಸ್ಮರಿಸಿದರು.

‘ಅವರು ರಚಿಸಿದ ವಚನಗಳ ಸಂಖ್ಯೆ ಏಳು ಕೋಟಿ ಎಂದು ಹೇಳಲಾಗುತ್ತದೆ. ಆದರೆ ಎರಡು ಸಾವಿರ ವಚನಗಳು ಮಾತ್ರ ಲಭ್ಯವಾಗಿವೆ’ ಎಂದು ತಿಳಿಸಿದರು.

ಕರ್ನಾಟಕ ಪ್ರದೇಶ ಕುಂಬಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಕುಂಬಾರ ಮಾತನಾಡಿದರು. ಶ್ರೀರಂಗ ಜೋಶಿ ಮತ್ತು ತಂಡದವರು ವಚನ ಗಾಯನ ಪ್ರಸ್ತುತ‍ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಾಹಿತಿ ಯ.ರು. ಪಾಟೀಲ, ಸರಳಾ, ಮೇಘಾ ಕುಂದರಗಿ ಇದ್ದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಸರ್ವಜ್ಞ ಭಾವಚಿತ್ರದ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.