ಸವದತ್ತಿ: ‘ಕೊರೊನಾ ಸೋಂಕಿನ ಭೀತಿಯ ನಡುವೆ ಸುರಕ್ಷತಾ ಕ್ರಮದೊಂದಿಗೆ ಇಲ್ಲಿನ ಎಪಿಎಂಸಿಯಲ್ಲಿ ₹ 49.61 ಕೋಟಿ ಮೌಲ್ಯದ ಉತ್ಪನ್ನಗಳ ವಹಿವಾಟು ನಡೆದಿದೆ. ಮೂರು ತಿಂಗಳಲ್ಲಿ ₹74.42 ಲಕ್ಷ ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದೆ’ ಎಂದು ಅಧ್ಯಕ್ಷ ಜಗದೀಶ ಹನಶಿ ತಿಳಿಸಿದರು.
ಇಲ್ಲಿ ಸೋಮವಾರ ನಡೆದ ತ್ರೈಮಾಸಿಕ ಸಭೆ ಹಾಗೂ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಡೀ ಪ್ರಪಂಚವೆ ಕೋವಿಡ್–19ಗೆ ತುತ್ತಾಗಿದೆ. ರೈತರು ಕೃಷಿ ಉತ್ಪನ್ನಗಳನ್ನು ಮತ್ತು ಮಾರಲು ಹರಸಾಹಸಪಟ್ಟು ಸಾಕಷ್ಟು ಕಷ್ಟ ಮತ್ತು ನಷ್ಟ ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮಾನಿ ಅವರ ಪ್ರಯತ್ನದಿಂದ ಇಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಲಾಕ್ಡೌನ್ ಅವಧಿಯಲ್ಲಿ ರೈತರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗಿದೆ. ಸ್ಪರ್ಧಾತ್ಮಕ ಬೆಲೆ ದೊರೆಯುವಂತೆ ಮಾಡಿದ್ದರಿಂದ ರೈತರಿಗೆ ಅನುಕೂಲವಾಗಿದೆ’ ಎಂದರು.
‘ಕೋವಿಡ್–19 ವಿರುದ್ಧದ ಯುದ್ಧಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಶಾಸಕರ ಮೂಲಕ ₹ 10 ಲಕ್ಷ ನೀಡಲಾಗಿದೆ’ ಎಂದು ಹೇಳಿದರು.
ನಾಮನಿರ್ದೇಶನ ಸದಸ್ಯರಾದ ಅಣ್ಣಪ್ಪ ನುಗ್ಗಾನಟ್ಟಿ, ಮಲ್ಲಿಕಾರ್ಜುನ ನರಗುಂದ, ಶೋಭಾ ಪಟ್ಟಣಶೆಟ್ಟಿ ಅವರನ್ನು ಸತ್ಕರಿಸಲಾಯಿತು.
ಉಪಾಧ್ಯಕ್ಷ ಬಸನಾಯ್ಕ ಮಲ್ಲೂರ, ಮಾಜಿ ಅಧ್ಯಕ್ಷ ಪ್ರಭು ಪ್ರಭುನವರ, ಸದಸ್ಯರಾದ ಎಫ್.ವಿ. ಕಲ್ಲೂರ, ಎಫ್.ಎಸ್. ಸಿದ್ದನಗೌಡರ, ಪ್ರಕಾಶ ನರಿ, ಮೈನಾವತಿ ಪಾಟೀಲ, ಮಲ್ಲವ್ವ ಕಲ್ಲೊಳ್ಳಿ, ಚಂದ್ರಶೇಖರ ಅಳಗೋಡಿ, ಚಂದ್ರಶೇಖರ ಸವದತ್ತಿ, ರಾಮಚಂದ್ರ ಶೆಟ್ಟರ, ಕಾರ್ಯದರ್ಶಿ ಮಹೇಶ ಮಟ್ಟಿ, ಎಂ.ವಿ. ಗದಗ, ಸಿ.ವಿ. ದಾಸರ, ಪ್ರವೀಣ ಅಂಗಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.