ADVERTISEMENT

112 ರಸಗೊಬ್ಬರ ಮಳಿಗೆಗಳಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 23 ಮೇ 2020, 12:09 IST
Last Updated 23 ಮೇ 2020, 12:09 IST
ಕೃಷಿ ಅಧಿಕಾರಿಗಳು ರಸಗೊಬ್ಬರ ಮಳಿಗೆಯೊಂದರ ತಪಾಸಣೆ ನಡೆಸಿದರು
ಕೃಷಿ ಅಧಿಕಾರಿಗಳು ರಸಗೊಬ್ಬರ ಮಳಿಗೆಯೊಂದರ ತಪಾಸಣೆ ನಡೆಸಿದರು   

ಬೆಳಗಾವಿ: ಜಿಲ್ಲೆಯ ವಿವಿಧ ರಸಗೊಬ್ಬರ ಮಳಿಗೆಗಳ ತಪಾಸಣೆ ನಡೆಸಿದ ಕೃಷಿ ಅಧಿಕಾರಿಗಳು, ವಿವಿಧ ನ್ಯೂನ್ಯತೆಗಳಿಗಾಗಿ 112 ರಸಗೊಬ್ಬರ ಮಳಿಗೆಗಳಿಗೆ ನೋಟಿಸ್‌ ನೀಡಿದ್ದಾರೆ.

ಕಳೆದ ಎರಡು ದಿನಗಳಿಂದ ಕೃಷಿ ಇಲಾಖೆ ಹಾಗೂ ಜಾಗೃತ ಕೋಶದ ಒಟ್ಟು 65 ಅಧಿಕಾರಿಗಳನ್ನು ಒಳಗೊಂಡ 19 ತಂಡಗಳು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 336 ಮಾರಾಟ ಮಳಿಗೆಗಳ ತಪಾಸಣೆ ಕೈಗೊಂಡಿತ್ತು.

ಸೂಕ್ತ ದಾಖಲಾತಿಗಳಿಲ್ಲದ ಹಾಗೂ ಗುಣಮಟ್ಟದ ಬಗ್ಗೆ ಸಂಶಯಾತ್ಮಕ ಪರಿಕರ ಹೊಂದಿದ 76 ಮಾರಾಟಗಾರರಿಗೆ ಅಧಿಕಾರಿಗಳು ಮಾರಾಟ ತಡೆ ನೋಟಿಸ್‌ ನೀಡಿದ್ದಾರೆ.

ADVERTISEMENT

ಕಳಪೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮಳಿಗೆಯೊಂದರಿಂದ ₹ 62,520 ಮೌಲ್ಯದ ರಸಗೊಬ್ಬರವನ್ನು ಮುಟ್ಟುಗೋಲು ಹಾಕಲಾಗಿದೆ. ಚಿಕ್ಕೋಡಿ ತಾಲ್ಲೂಕಿನ ಮಳಿಗೆಯೊಂದರಲ್ಲಿ ಸಂಶಯಾತ್ಮಕವಿರುವ 180 ಲೀಟರ್ ಜೈವಿಕ ಉತ್ಪನ್ನ ಮಾರಾಟಕ್ಕೆ ತಡೆ ನೀಡಲಾಗಿದೆ. ಈ ಉತ್ಪನ್ನದ ಮಾದರಿಯನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಕಿತ್ತೂರು ತಾಲ್ಲೂಕಿನಲ್ಲಿ ಪರವಾನಿಗೆ ಇಲ್ಲದ ಅನಧಿಕೃತ ಮಾರಾಟ ಮಳಿಗೆಯಲ್ಲಿದ್ದ ₹ 80 ಸಾವಿರ ಮೌಲ್ಯದ 740 ಕೆ.ಜಿ ಬಿತ್ತನೆ ಬೀಜ ಹಾಗೂ 100 ಲೀಟರ್ ಕಳೆನಾಶಕವನ್ನು ಮುಟ್ಟುಗೋಲು ಹಾಕಿದ ಅಧಿಕಾರಿಗಳು, ಮಾರಾಟ ಮಳಿಗೆಗೆ ಬೀಗ ಜಡಿದಿದ್ದಾರೆ.

ಸವದತ್ತಿ ತಾಲ್ಲೂಕಿನಲ್ಲಿ ಗುಣಮಟ್ಟದ ಬಗ್ಗೆ ಸಂಶಯವಿದ್ದ ₹ 25 ಸಾವಿರ ಜೈವಿಕ ಕೀಟನಾಶಕ ಹಾಗೂ
ಪರವಾನಿಗೆಯಲ್ಲಿ ನಮೂದಾಗದೆ ಇರುವ ₹ 50 ಸಾವಿರ ಮೌಲ್ಯದ ಕೀಟನಾಶಕವನ್ನು ಜಪ್ತಿ ಮಾಡಿದ್ದಾರೆ.

‘ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದ್ದೇವು. ಈ ರೀತಿಯ ತಪಾಸಣೆ ಅಭಿಯಾನವನ್ನು ನಿರಂತರವಾಗಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು. ಕಳಪೆ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರೈತಬಾಂಧವರಿಗೆ ಕೃಷಿ ಪರಿಕರಗಳ ಗುಣಮಟ್ಟದ ಬಗ್ಗೆ ಸಂಶಯ ಬಂದಲ್ಲಿ ಕೃಷಿ ಇಲಾಖೆಗೆ ದೂರು ನೀಡಬಹುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.