ADVERTISEMENT

ತಡೆಯಾಜ್ಞೆ ಆದೇಶ ಉಲ್ಲಂಘನೆ: ಡಿಸಿಪಿ ಸೀಮಾಗೆ ಕಾರಣ ಕೇಳಿ ನೋಟಿಸ್’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 5:54 IST
Last Updated 8 ನವೆಂಬರ್ 2020, 5:54 IST
ಸೀಮಾ ಲಾಟ್ಕರ್
ಸೀಮಾ ಲಾಟ್ಕರ್   

ಬೆಳಗಾವಿ: ‘ನ್ಯಾಯಾಲಯದ ತಡೆಯಾಜ್ಞೆ ಆದೇಶ ಉಲ್ಲಂಘಿಸಿದ್ದ ಆರೋಪದಡಿ ಇಲ್ಲಿನ ಹಿಂದಿನ ಡಿಸಿಪಿ ಸೀಮಾ ಲಾಟ್ಕರ್ ಅವರಿಗೆ 10ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ’ ಎಂದು ವಕೀಲ ಜಾಹೀರ್ ಹತ್ತರಕಿ ತಿಳಿಸಿದರು.

‘ಗಾಂಧಿನಗರದ‌ ನಿವಾಸಿ ಮಲ್ಲಿಕ್ ಜಾನ್ ಪಠಾಣ್ ಹಾಗೂ ಸಂಬಂಧಿಕರಿಗೆ ಸೇರಿದ ಆಸ್ತಿ ವ್ಯಾಜ್ಯ ಸಂಬಂಧ ಸಿಆರ್‌ಪಿಸಿ ಕಲಂ 107ರಲ್ಲಿ ಲಾಟ್ಕರ್ ವಿಚಾರಣೆ ನಡೆಸಿದ್ದರು. ಮಲ್ಲಿಕ್ ಜಾನ್ ಅವರಿಗೆ ಜೂನ್ 6ರಂದು ನೋಟಿಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಲ್ಲಿಕ್ ನ್ಯಾಯಾಲಯದ ಮೊರೆ ಹೋಗಿದ್ದರು. ಲಾಟ್ಕರ್‌ ನೀಡಿದ್ದ ನೋಟಿಸ್‌ಗೆ ನ್ಯಾಯಾಲಯ ಜೂನ್ 29ಕ್ಕೆ ತಡೆಯಾಜ್ಞೆ ನೀಡಿತ್ತು. ಆದೇಶ ಪ್ರತಿಯನ್ನು ಮಲ್ಲಿಕ್ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಲ್ಲಿಸಿದ್ದರು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

‘ಅ.9ರಂದು ಇದೇ ಪ್ರಕರಣದಡಿ ವಿಚಾರಣೆ ನಡೆಸಿದ್ದ ಸೀಮಾ ಮಲ್ಲಿಕ್ ಜಾನ್‌ಗೆ ಮತ್ತೆ ನೋಟಿಸ್ ನೀಡಿದ್ದರು. ತಡೆಯಾಜ್ಞೆ ಇದ್ದರೂ‌ ಇನ್ನೊಂದು ನೋಟಿಸ್ ನೀಡಿದ್ದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಹೇಮಂತ್ ಅವರು ನ. 26ಕ್ಕೆ ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ನೋಟಿಸ್ ಜಾರಿಗೊಳಿಸಿ ಆದೇಶಿಸಿದ್ದಾರೆ’ ಎಂದು ತಿಳಿಸಿದರು. ಅರ್ಜಿದಾರರ ಪರ ಜಾಹೀರ್ ವಕಾಲತ್ತು ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.