ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ: ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ -ಶ್ರದ್ಧಾ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 12:11 IST
Last Updated 24 ಮಾರ್ಚ್ 2021, 12:11 IST
ಶ್ರದ್ಧಾ ಅಂಗಡಿ
ಶ್ರದ್ಧಾ ಅಂಗಡಿ   

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಡವಿದೆ. ಈ ವಿಷಯ ಈಚೆಗೆ ನಡೆದ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚೆಯಾಗಿದೆ. ಮನವರಿಕೆಯನ್ನೂ ಮಾಡಿಕೊಡಲಾಗಿದೆ. ಇತರ ಅಭ್ಯರ್ಥಿಗಳ ಹೆಸರುಗಳೂ ಪ್ರಸ್ತಾಪವಾಗಿವೆ. ಹೈಕಮಾಂಡ್‌ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ’ ಎಂದು ದಿವಂಗತ ಸುರೇಶ ಅಂಗಡಿ ಪುತ್ರಿ ಹಾಗೂ ಸಚಿವ ಜಗದೀಶ ಶೆಟ್ಟರ್‌ ಸೊಸೆ ಶ್ರದ್ಧಾ ಅಂಗಡಿ ತಿಳಿಸಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಟಿಕೆಟ್‌ ನೀಡಿದರೆ, ಅವಕಾಶ ಕೊಟ್ಟರೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧಳಿದ್ದೇನೆ. ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರಲಿದ್ದೇವೆ’ ಎಂದರು.

‘ತಂದೆ ಜನರೊಂದಿಗೆ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರು. ಅವರಿಲ್ಲದಿದ್ದರೂ ಜನರು ನಮ್ಮನ್ನು ಕಾರ್ಯಕ್ರಮಗಳಿಗೆ ಕರೆಯುತ್ತಿದ್ದಾರೆ. ಗೌರವ ಕೊಡುತ್ತಿದ್ದಾರೆ. ಅವರು ಕರೆಯುವ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೇವೆ. ಮುಂದೆಯೂ ಆ ಸಂಪರ್ಕ ಇಟ್ಟುಕೊಂಡು ಹೋಗುತ್ತೇವೆ. ಮೊದಲಿನಿಂದಲೂ ತಂದೆಯವರೊಂದಿಗೆ ಇದ್ದವರ ಜೊತೆ ನಾವೂ ಇರುತ್ತೇವೆ. ಚುನಾವಣೆಗೆ ಸ್ಪರ್ಧಿಸಬೇಕೆಂಬ ಒತ್ತಡ ನಮ್ಮ ಅಭಿಮಾನಿಗಳಿಂದಲೂ ಇದೆ’ ಎಂದು ಹೇಳಿದರು.

ADVERTISEMENT

‘ನಾನು ದೆಹಲಿಗೆ ಹೋಗಿರಲಿಲ್ಲ. ಅಲ್ಲೇನೂ ಕೆಲಸವಿರಲಿಲ್ಲ. ಬೆಂಗಳೂರಿಗೆ ಹೋಗಿದ್ದೆ. ಟಿಕೆಟ್ ವಿಚಾರದಲ್ಲಿ ವರಿಷ್ಠರು ಕರೆ ಮಾಡಿ ಮಾತಾಡಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.