ADVERTISEMENT

ಸಿರಸಂಗಿ ಲಿಂಗರಾಜರ ಕೊಡುಗೆ ಅಪಾರ: ವಿದ್ವಾಂಸ ವೀರಣ್ಣ ರಾಜೂರ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 12:27 IST
Last Updated 10 ಜನವರಿ 2019, 12:27 IST
ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಸಿರಸಂಗಿ ಲಿಂಗರಾಜ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು
ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಸಿರಸಂಗಿ ಲಿಂಗರಾಜ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು   

ಬೆಳಗಾವಿ: ‘ಸಮಾಜಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆದ ಸಿರಸಂಗಿ ಲಿಂಗರಾಜರು ಶರಣರು ನೀಡಿದ ಕಾಯಕ-ದಾಸೋಹ ಸಿದ್ಧಾಂತಗಳನ್ನು ನಿಜವಾದ ಅರ್ಥದಲ್ಲಿ ಆಚರಣೆಗೆ ತಂದವರು’ ಎಂದು ವಿದ್ವಾಂಸ ವೀರಣ್ಣ ರಾಜೂರ ಸ್ಮರಿಸಿದರು.

ಇಲ್ಲಿನ ಲಿಂಗರಾಜ ಕಾಲೇಜಿನಲ್ಲಿ ಗುರುವಾರ ನಡೆದ ತ್ಯಾಗವೀರ ಸಿರಸಂಗಿ ಲಿಂಗರಾಜರ 158ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅವರು ತ್ಯಾಗದಿಂದಾಗಿ ಅಮರರಾಗಿದ್ದಾರೆ. ಕಷ್ಟಗಳನ್ನು ಅನುಭವಿಸಿದರೂ ಎಲ್ಲವನ್ನೂ ಸಮರ್ಥವಾಗಿ ಎದುರಿಸಿ ಸಮಾಜಮುಖಿಯಾಗಿ ಬಾಳಿದರು. ಕೃಷಿಚಿಂತಕರಾಗಿ ಅವರ ಮಾಡಿರುವ ಕೆಲಸಗಳು ಇಂದಿಗೂ ಮಾರ್ಗದರ್ಶಿ ಎನಿಸಿವೆ. ಶಿಕ್ಷಣ, ವ್ಯಾಪಾರ, ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರೆ. ಕೆರೆ, ಬಾವಿಗಳನ್ನು ಕಟ್ಟಿಸಿದರು. ಕ್ಷಯ ರೋಗಕ್ಕೆ ತುತ್ತಾದಾಗ ತಮ್ಮ ಸಮಸ್ತ ಆಸ್ತಿಯನ್ನೂ ಸಮಾಜದ ಬಡ ಮಕ್ಕಳಿಗೆ ಮುಡುಪಾಗಿಟ್ಟರು’ ಎಂದು ತಿಳಿಸಿದರು.

ADVERTISEMENT

‘ಅವರು ಬರೆದ ಇಚ್ಛಾಪತ್ರ, ಇಂದಿಗೂ ಅಮರಪತ್ರವಾಗಿದೆ. ಜಿಲ್ಲಾಧಿಕಾರಿ ಅಧೀನದಲ್ಲಿರುವ ಶಿರಸಂಗಿ ನವಲಗುಂದ ಶಿಕ್ಷಣ ಟ್ರಸ್ಟ್‌ ಸಾವಿರಾರು ಮಕ್ಕಳಿಗೆ ಧನಸಹಾಯ ನೀಡಿರುವುದೇ ಇದಕ್ಕೆ ಸಾಕ್ಷಿ. ಅಂತೆಯೇ ಲಿಂಗರಾಜರ ನೆನಪು ಸುಖಸಮುದ್ರ. ಕೆಎಲ್‌ಇ ಸಂಸ್ಥೆಯು ತನ್ನೆಲ್ಲ ಅಂಗ ಸಂಸ್ಥೆಗಳಲ್ಲಿ ಲಿಂಗರಾಜರ ಜಯಂತಿ ಆಚರಿಸುತ್ತಿರುವುದು, ಇಂದಿನ ಯುವಜನರಿಗೆ ಪರಿಚಯಿಸುತ್ತಿರುವುದು ಸ್ತುತ್ಯಾರ್ಹವಾದುದು’ ಎಂದರು.

ಅಧ್ಯಕ್ಷತೆ ಕೆಎಲ್‌ಇ ಸೊಸೈಟಿ ಅಧ್ಯಕ್ಷ ಶಿವಾನಂದ ಕೌಜಲಗಿ ಮಾತನಾಡಿ, ‘ವ್ಯಕ್ತಿಗಿಂತಲೂ ಸಮಾಜ ಮುಖ್ಯ ಎನ್ನುವುದನ್ನು ಸಾಬೀತುಪಡಿಸಿದ ಅವರ ನಡೆ–ನುಡಿ ಇಂದಿಗೂ ಅನುಕರಣೀಯವಾಗಿದೆ. ಅವರು ಸ್ಥಾಪಿಸಿದ ಶಿಕ್ಷಣ ಟ್ರಸ್ಟ್‌ನಿಂದ ಧನಸಹಾಯ ಪಡೆದ ಹಲವರು ಸಮಾಜ ಕಟ್ಟುವಲ್ಲಿ ಮಹತ್ವ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಲಾಯಿತು. ಎನ್‌ಎಸ್‌ಎಸ್ ಘಟಕದ ಸಂಯೋಜಕ ಎಸ್.ಎನ್. ಮೂಲಿಮನಿ ನೇತೃತ್ವದಲ್ಲಿ ಪ್ರಭಾಕರ ಕೋರೆ ಆಸ್ಪತ್ರೆಯ ರಕ್ತಭಂಡಾರಕ್ಕೆ 80 ಯುನಿಟ್‌ ರಕ್ತದಾನ ಮಾಡಲಾಯಿತು.

ಲಿಂಗರಾಜ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ತಟವಟಿ, ಕಾರ್ಯಾಧ್ಯಕ್ಷ ಡಾ.ಆರ್.ಎಂ. ಪಾಟೀಲ, ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಬಿ.ಆರ್. ಪಾಟೀಲ, ಕಾರ್ಯದರ್ಶಿಗಳಾದ ಬಿ.ಜಿ. ದೇಸಾಯಿ, ಎಚ್.ಬಿ. ರಾಜಶೇಖರ, ಎಫ್.ವಿ. ಮಾನ್ವಿ, ಎಂ.ಆರ್. ಉಳ್ಳೆಗಡ್ಡಿ, ಬಿ.ಎಸ್. ಗವಿಮಠ, ಸುಧಾ ಉಪ್ಪಿನ ಇದ್ದರು.

ಗುರುದೇವಿ ಹುಲೆಪ್ಪನವರಮಠ ಪರಿಚಯಿಸಿದರು. ಮಹೇಶ ಗುರನಗೌಡರ ನಿರೂಪಿಸಿದರು. ಕಾರ್ಯದರ್ಶಿ ಎಚ್.ಎಂ. ಚನ್ನಪ್ಪಗೋಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.