ADVERTISEMENT

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನನೆಗುದಿಗೆ

ನಿಗದಿಯಾದ ಮೀಸಲಾತಿ: ಚುನಾಯಿತರಿಗೆ ಸಿಗದ ಅಧಿಕಾರದ ‘ಸ್ವಾತಂತ್ರ್ಯ’

ಪ್ರದೀಪ ಮೇಲಿನಮನಿ
Published 13 ಆಗಸ್ಟ್ 2022, 2:55 IST
Last Updated 13 ಆಗಸ್ಟ್ 2022, 2:55 IST
ಪ್ರಕಾಶ ಮಠದ
ಪ್ರಕಾಶ ಮಠದ   

ಚನ್ನಮ್ಮನ ಕಿತ್ತೂರು: ಕಿತ್ತೂರು ಸೇರಿದಂತೆ ಜಿಲ್ಲೆಯಲ್ಲಿಯ ವಿವಿಧ ಪಟ್ಟಣ ಮತ್ತು ನಗರ ಪ್ರದೇಶಗಳ ಪಂಚಾಯ್ತಿ ಹಾಗೂ ಪುರಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿ ಏಳೂವರೆ ತಿಂಗಳು ಕಳೆದರೂ ನೂತನ ಜನಪ್ರತಿನಿಧಿಗಳಿಗೆ ಅಧಿಕಾರದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ನಿಗದಿಪಡಿಸದ ಸರ್ಕಾರದ ಕ್ರಮದ ವಿರುದ್ಧ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯವಾದರೂ ಕೆಲವು ಬಾರಿ ಸರಿಯಾದ ಸಮಯಕ್ಕೆ ಚುನಾವಣೆ ನಡೆಸುವುದಿಲ್ಲ. ಈಗ ಚುನಾವಣೆ ಫಲಿತಾಂಶ ಘೋಷಣೆಯಾಗಿ ತಿಂಗಳುಗಳೇ ಕಳೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಗೆ ಸರ್ಕಾರ ವಿಳಂಬ ಏಕೆ ಮಾಡುತ್ತಿದೆ ಎಂದು ಸದಸ್ಯರು ಪ್ರಶ್ನಿಸುತ್ತಾರೆ.

ADVERTISEMENT

ಎರಡು ಪಟ್ಟಣ ಪಂಚಾಯ್ತಿ:

ಕಿತ್ತೂರು ತಾಲ್ಲೂಕಿನಲ್ಲಿ ಕಿತ್ತೂರು ಹಾಗೂ ಎಂ.ಕೆ.ಹುಬ್ಬಳ್ಳಿ ಗ್ರಾಮ ಪಂಚಾಯ್ತಿಗಳನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯ್ತಿಗಳ ಸ್ಥಾನ ನೀಡಲಾಗಿದೆ. ಹೊಸ ಪಟ್ಟಣ ಪಂಚಾಯ್ತಿ ರಚನೆಯಾದ ನಂತರ ಚುನಾವಣೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಐದು ವರ್ಷಗಳ ಅಧಿಕಾರ ಅವಧಿ ಪೂರೈಸಿದ್ದಾರೆ. ಕಳೆದ ಆಡಳಿತ ಮಂಡಳಿ ಸದಸ್ಯರ ಅವಧಿ ಜುಲೈ 2021ಕ್ಕೆ ಕೊನೆಗೊಂಡಿತ್ತು. ಆದರೆ, ಚುನಾವಣೆ ನಡೆಸಲು, ಕ್ಷೇತ್ರಗಳ ಮೀಸಲಾತಿ ನಿಗದಿ ಪಡಿಸಲು ಆಗಲೂ ಸರ್ಕಾರ ವಿಳಂಬ ನೀತಿ ಅನುಸರಿಸಿತು ಎಂದು ಇಲ್ಲಿಯ ಪಟ್ಟಣ ಪಂಚಾಯ್ತಿಗೆ ಆಯ್ಕೆಯಾಗಿ ಬಂದಿರುವ ಪಕ್ಷೇತರ ಸದಸ್ಯ ಎಂ.ಎಫ್.ಜಕಾತಿ ಅಸಮಾಧಾನಪಟ್ಟರು.

ಚುನಾವಣೆ ಮುಗಿದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಲು ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಇದನ್ನೆಲ್ಲ ನೋಡಿದರೆ ಸರ್ಕಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಎಷ್ಟು ಪ್ರೀತಿಯಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.