ADVERTISEMENT

10 ಸಾವಿರ ಮಹಿಳೆಯರಿಂದ ಕುಂಕುಮಾರ್ಚನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 17:08 IST
Last Updated 30 ಸೆಪ್ಟೆಂಬರ್ 2022, 17:08 IST
ಜೊಲ್ಲೆ ಗ್ರೂಪ್‌ ಸಹಯೋಗದಲ್ಲಿ ನಿಪ್ಪಾಣಿಯಲ್ಲಿ ಜರುಗಿದ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಜೊಲ್ಲೆ ಶುಕ್ರವಾರ ಉದ್ಘಾಟಿಸಿದರು
ಜೊಲ್ಲೆ ಗ್ರೂಪ್‌ ಸಹಯೋಗದಲ್ಲಿ ನಿಪ್ಪಾಣಿಯಲ್ಲಿ ಜರುಗಿದ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಜೊಲ್ಲೆ ಶುಕ್ರವಾರ ಉದ್ಘಾಟಿಸಿದರು   

ನಿಪ್ಪಾಣಿ: ‘ಇನ್ನು ಮುಂದೆ ಪ್ರತಿ ನವರಾತ್ರಿಯ ಸಂದರ್ಭದಲ್ಲೂ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮ ಅಯೋಜಿಸಲಾಗುವುದು’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕುಂಕುಮಾರ್ಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನ ಮತಕ್ಷೇತ್ರದಲ್ಲಿ ಸುಮಾರು 10 ಸಾವಿರ ಮಹಿಳೆಯರನ್ನು ಒಗ್ಗೂಡಿಸಿ ಬೃಹತ್ ಕುಂಕುಮಾರ್ಚನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪದ್ಧತಿ ಮುಂದುವರಿಯಬೇಕು ಎನ್ನುವ ಆಶಯ ನಮ್ಮದು. ಈ ಬಗ್ಗೆ ಸೂಕ್ತ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ADVERTISEMENT

‘ರಾಜ್ಯದ ವಿವಿಧ ಧಾರ್ಮಿಕ ಇಲಾಖೆಯ ದೇವಸ್ಥಾನಗಳಲ್ಲಿ ಲಲಿತಾ ಪಂಚಮಿ ಅಂಗವಾಗಿ ಮಹಿಳೆಯರನ್ನು ಆಹ್ವಾನಿಸಿ ಸಾಮೂಹಿಕ ಕುಂಕುಮಾರ್ಚನೆ ಆಚರಿಸಲಾಯಿತು. ಇಂದು ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗದೆ ಇರುವ ದೇವಸ್ಥಾನಗಳಲ್ಲಿ ಅಕ್ಟೊಬರ್ 3 ರಂದು ಕಾರ್ಯಕ್ರಮ ಆಯೋಜಿಸಲು ಸೂಚಿಸಲಾಗಿದೆ’ ಎಂದರು.

ಕೊಲ್ಹಾಪುರ ಹಾಲಕ್ಷ್ಮಿ ದೇವಾಲಯದ ಅರ್ಚಕರ ಮುಂದಾಳತ್ವದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿತು. ಭಾಗವಹಿಸಿದ 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಅವರ ಕುಟುಂಬದವರಿಗೆ ಹೋಳಿಗೆಯ ಊಟ ಆಯೋಜಿಸಲಾಗಿತ್ತು. ಚಿಕ್ಕೋಡಿ ಸಂಸದ ಜೊಲ್ಲೆ ಗ್ರೂಪ್ ಮುಖ್ಯಸ್ಥ ಅಣ್ಣಾಸಾಹೇಬ್‌ ಜೊಲ್ಲೆ ನೇತೃತ್ವ ವಹಿಸಿದ್ದರು. ಜೊಲ್ಲೆ ಗ್ರೂಪ್ ವತಿಯಿಂದ 11 ಸಾವಿರ ಕುಂಕುಮಾರ್ಚನೆಯ ಕಿಟ್‍ಗಳನ್ನು ಸಿದ್ಧಗೊಳಿಸಲಾಗಿತ್ತು.

ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಕಾರ್ಯಾಧ್ಯಕ್ಷ ಎಂ.ಪಿ. ಪಾಟೀಲ, ಸಂಚಾಲಕ ಅಪ್ಪಾಸಾಹೇಬ್‌ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.