ಬೆಳಗಾವಿ: ಕಬ್ಬಿಗೆ ಸರ್ಕಾರ ನಿಗದಿಪಡಿಸಿದಷ್ಟು ದರ ನೀಡುವುದಕ್ಕೆಬದ್ಧವಾಗಿದ್ದೇನೆ ಎಂದು ಶಾಸಕಿ, ಕಾಂಗ್ರೆಸ್ನ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.
ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಗ್ರಾಮೀಣ ಕ್ಷೇತ್ರದ 9 ಹಳ್ಳಿಗಳಿಗೆ ನಗರ ಬಸ್ ನಿಲ್ದಾಣದಿಂದ ಬಸ್ಸುಗಳ ಕಾರ್ಯಾಚರಣೆಗೆ ಗುರುವಾರ ಹಸಿರುನಿಶಾನೆ ತೋರಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
'ನಾನು ಸಕ್ಕರೆ ಕಾರ್ಖಾನೆಯನ್ನು ಈ ವರ್ಷವಷ್ಟೇ ಆರಂಭಿಸಿದ್ದೇನೆ. ನಿರ್ವಹಣೆ ಕುರಿತು ಇನ್ನೂ ಕಲಿಯುತ್ತಿದ್ದೇನೆ. ಹೊಸ ಕಾರ್ಖಾನೆ ಎಂಬ ಕಾರಣಕ್ಕೆ ನನ್ನನ್ನು ಸಭೆಗೆ ಆಹ್ವಾನಿಸಿಲ್ಲದಿರಬಹುದು. ಕರೆದಿದ್ದರೆ ಹೋಗುತ್ತಿದ್ದೆ' ಎಂದು ಪ್ರತಿಕ್ರಿಯೆ ನೀಡಿದರು.
'ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೂ ತೊಂದರೆಗಳಿರುತ್ತವೆ. ಆದರೆ, ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ರಾಜಿ ಪ್ರಶ್ನೆ ಇಲ್ಲ' ಎಂದರು.
'ಕಾಯಲವೇ ಕೈಲಾಸ ಎಂದು ನಂಬಿದವಳು ನಾನು. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ಸಿಕ್ಕರೆ ನಿರ್ವಹಿಸಲು ಸಿದ್ಧವಿದ್ದೇನೆ' ಎಂದರು.
ರೈತ ಮಹಿಳೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವಹೇಳನ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಉದ್ವೇಗದಲ್ಲಿ ಒಂದು ಮಾತು ಆಡಿರಬಹುದು. ಮುಖ್ಯಮಂತ್ರಿ ಹಾಗೂ ಮಹಿಳೆ ಇಬ್ಬರೂ ಕ್ಷಮೆ ಕೇಳಿರುವುದರಿಂದ ಅದು ಮುಗಿದ ಅಧ್ಯಾಯವಾಗಿದೆ. ಹೀಗಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಜೆಡಿಎಸ್ ಪಕ್ಷದ ಚಿಹ್ನೆಯಲ್ಲೇ ಮಹಿಳೆ ಇದ್ದಾಳೆ. ಪಕ್ಷದ ಚಿಹ್ನೆಯನ್ನು ಪೂಜಿಸುವ, ಗೌರವಿಸುವ ಕ್ರಮ ನಮ್ಮದು' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.