ಬೆಳಗಾವಿ: ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲೆಗಳಿಗೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡುವಂತೆ ಆಗ್ರಹಿಸಿ ಇಲ್ಲಿನ ಗುರುಸ್ಪಂದನ ಶಿಕ್ಷಕರ ಬಳಗದವರು ಡಿಡಿಪಿಐ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು.
‘ಮುಖ್ಯೋಪಾಧ್ಯಾಯರನ್ನು ಎ, ಬಿ ಮತ್ತು ಸಿ ವಲಯಗಳಿಗೆ ವರ್ಗಾವಣೆ ಕೌನ್ಸೆಲಿಂಗ್ ಮೂಲಕ ಸ್ಥಳಗಳ ಹೊಂದಾಣಿಕೆ ಮಾಡಿಕೊಡಬೇಕು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಬಡ್ತಿ ವರ್ಗಾವಣೆ ನಡೆದಿದೆ. ವರ್ಷದಲ್ಲಿ 2 ಬಾರಿಯಾದರೂ ಸ್ಥಳ ಹೊಂದಾಣಿಕೆ ನಡೆಸಬೇಕು. ಜಿಲ್ಲೆಯಲ್ಲಿ ಬಹಳಷ್ಟು ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಸಹ ಶಿಕ್ಷಕರಿಗೆ ಬಡ್ತಿ ನೀಡುವ ಮೂಲಕ ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ, ಕುಮಾರಸ್ವಾಮಿ ಚರಂತಿಮಠ, ನೌಕರರ ಹಾಗೂ ಶಿಕ್ಷಕರ ಸಂಘದ ಚುನಾಯಿತ ಪ್ರತಿನಿಧಿಗಳಾದ ಅಸೀಫ್ ಅತ್ತಾರ, ಎಸ್.ಸಿ., ಎಸ್.ಟಿ. ಶಿಕ್ಷಕರ ಸಂಘದ ರಾಜು ಕೋಲಕಾರ, ಗುರುಸ್ಪಂದನ ಶಿಕ್ಷಕರ ಬಳಗದ ಪ್ರಮುಖರಾದ ರಾಜೇಂದ್ರಕುಮಾರ ಗೋಶಾನಟ್ಟಿ, ರಮೇಶ್ ಎಂ. ಸಿಂಗದ, ಎಸ್.ಎಂ. ದೇಸೂರಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.