ಬೆಳಗಾವಿ: ‘ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕವೇ ವಿಕಸಿತ ಭಾರತದ ಕನಸು ನನಸಾಗಲಿದೆ’ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈದ್ಯಕೀಯ ಸಲಹೆಗಾರ ಪ್ರೊ. ಅಜಯ್ಕುಮಾರ್ ಸೂದ್ ಅಭಿಪ್ರಾಯಪಟ್ಟರು.
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 25ನೇ ವಾರ್ಷಿಕ ಘಟಿಕೋತ್ಸವ(ಭಾಗ–1)ದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
‘ಇಂದು ಜಗತ್ತು ಕ್ಷಿಪ್ರವಾಗಿ ಬದಲಾಗುತ್ತಿದೆ. ಇದಕ್ಕೆ ತಂತ್ರಜ್ಞಾನವೂ ಉತ್ತಮ ಸಾರಥಿಯಾಗಿದೆ. ನಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕು ರೂಪಿಸುವ ಜತೆಗೆ, ಪ್ರಬಲ ರಾಷ್ಟ್ರ ನಿರ್ಮಿಸುವಲ್ಲಿ ತಂತ್ರಜ್ಞಾನ ಮಹತ್ತರ ಪಾತ್ರ ವಹಿಸುತ್ತಿದೆ. ಕೃಷಿ, ಆರೋಗ್ಯ ರಕ್ಷಣೆ ಮತ್ತಿತರ ರಂಗಗಳಲ್ಲಿ ಉತ್ಪಾದಕತೆ ಹೆಚ್ಚಿಸುವುದರೊಂದಿಗೆ ಆರ್ಥಿಕ ಬೆಳವಣಿಗೆಗೂ ಕಾರಣವಾಗಿದೆ’ ಎಂದು ಹೇಳಿದರು.
‘ಇಂದಿನ ವಿಜ್ಞಾನವೇ ನಾಳೆಯ ತಂತ್ರಜ್ಞಾನ. ಯುವ ಪದವೀಧರರು ತಮ್ಮ ಜ್ಞಾನವನ್ನು ಪರೀಕ್ಷೆಗಳಿಗೆ ಮಾತ್ರವಲ್ಲದೆ, ಸಮಾಜದ ಅಭಿವೃದ್ಧಿಗೂ ಬಳಸಬೇಕು. ತಾಂತ್ರಿಕ ರಂಗದಲ್ಲಿ ನೀವು ನೈಪುಣ್ಯ ಸಾಧಿಸಿದರೆ ಸಾಲದು, ಬದಲಿಗೆ ರಾಷ್ಟ್ರಪ್ರಜ್ಞೆಯುಳ್ಳ ನಾಗರಿಕನಾಗಬೇಕು. ಶಿಕ್ಷಣದಿಂದ ಈವರೆಗೆ ಪಡೆದ ಜ್ಞಾನ ಮತ್ತು ಇಚ್ಛಾಶಕ್ತಿಯಿಂದ ಸಮೃದ್ಧ ಭಾರತ ಕಟ್ಟಬಹುದು’ ಎಂದು ಅಭಿಪ್ರಾಯಪಟ್ಟರು.
‘ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ವೇಳೆ, ಭಾರತದ ತಂತ್ರಜ್ಞಾನದ ಕ್ಷಮತೆ ಮತ್ತು ರಕ್ಷಣಾ ಸಾಮರ್ಥ್ಯ ಸಾಬೀತಾಗಿದೆ. ದೇಶಿಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪಣಿಗಳು, ಡ್ರೋನ್ಗಳು ಮತ್ತು ಎಐ ಆಧಾರಿತ ನಿರ್ಣಯ ವ್ಯವಸ್ಥೆಗಳು ಭಾರತವನ್ನು ಆತ್ಮನಿರ್ಭರ ರಾಷ್ಟ್ರವಾಗಿ ರೂಪಿಸುತ್ತಿವೆ. ಈ ಯಶಸ್ಸಿನ ಹಿಂದೆ ಆತ್ಮನಿರ್ಭರ ಭಾರತದ ನಿರ್ಮಾತೃಗಳಾದ ನಮ್ಮ ವಿಜ್ಞಾನಿಗಳು, ಎಂಜಿನಿಯರ್ಗಳು ಮತ್ತು ನವೋದ್ಯಮಗಳ ಕೊಡುಗೆ ಅಪಾರವಾಗಿದೆ’ ಎಂದರು.
ಕುಲಪತಿ ಪ್ರೊ.ಎಸ್. ವಿದ್ಯಾಶಂಕರ ಸ್ವಾಗತಿಸಿದರು. ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್. ಶ್ರೀನಿವಾಸ, ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನಮಂಡಲ ಸದಸ್ಯರು ಇದ್ದರು.
ಆರ್ಥಿಕ ಬೆಳವಣಿಗೆಗೆ ತಂತ್ರಜ್ಞಾನ ಕಾರಣ ಸಮಾಜದ ಅಭಿವೃದ್ಧಿಗೆ ಜ್ಞಾನ ಬಳಸಿ ಭಾರತ ‘ಆತ್ಮನಿರ್ಭರ’ ದೇಶ
ಯುವ ಪದವೀಧರರು ಹೊಸ ಉದ್ಯಮ ಸ್ಥಾಪಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಭವ್ಯ ಭಾರತ ಕಟ್ಟಲು ಕೈಜೋಡಿಸಬೇಕುಥಾವರಚಂದ್ ಗೆಹಲೋತ್ ರಾಜ್ಯಪಾಲ
60052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಈ ಸಲದ ಘಟಿಕೋತ್ಸವದಲ್ಲಿ 60052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 58561 ವಿದ್ಯಾರ್ಥಿಗಳಿಗೆ(ಸ್ವಾಯತ್ತ ಮಹಾವಿದ್ಯಾಲಯದ 20707 ವಿದ್ಯಾರ್ಥಿಗಳು) ಬಿ.ಇ 117 ವಿದ್ಯಾರ್ಥಿಗಳಿಗೆ ಬಿ.ಟೆಕ್ 10 ವಿದ್ಯಾರ್ಥಿಗಳಿಗೆ ಬಿ.ಪ್ಲ್ಯಾನ್ 1040 ವಿದ್ಯಾರ್ಥಿಗಳಿಗೆ (ಸ್ವಾಯತ್ತ ಮಹಾವಿದ್ಯಾಲಯದ 234 ವಿದ್ಯಾರ್ಥಿಗಳು) ಬಿ.ಆರ್ಕ್ 24 ವಿದ್ಯಾರ್ಥಿಗಳಿಗೆ ಬಿ.ಎಸ್ಸಿ (ಆನರ್ಸ್) ಪದವಿ ನೀಡಲಾಯಿತು. 262 ಪಿಎಚ್.ಡಿ ಮತ್ತು ಎರಡು ಇಂಟಿಗ್ರೇಟೇಡ್ ಡ್ಯುಯಲ್ ಡಿಗ್ರಿ ಸಹ ಪ್ರದಾನ ಮಾಡಲಾಯಿತು.
‘ಹೊಸ ಆಲೋಚನೆಗಳು ಅಗತ್ಯ’
ರಾಜ್ಯಪಾಲ ಥಾವರಚಂದ ಗೆಹ್ಲೋತ್ ‘ಸ್ಟಾರ್ಟ್ಅಪ್ ಇಂಡಿಯಾ ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ತಮ್ಮದೇಯಾದ ಛಾಪು ಮೂಡಿಸಿವೆ. ಇಂದು ಆರೋಗ್ಯ ಸೈಬರ್ ಮತ್ತು ಇತರೆ ರಂಗಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಯುವಕರು ಆರ್ಥಿಕ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು. ದೇಶವನ್ನು ಯಶಸ್ವಿಪಥದಲ್ಲಿ ಮುನ್ನಡೆಸಲು ಯುವ ಪದವೀಧರರಿಂದ ಹೊಸ ಆಲೋಚನೆಗಳ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
‘ಕೊರೊನಾ ಕಾಲಘಟ್ಟದಲ್ಲಿ ಸಾಬೀತು’
‘ಕೊರೊನಾ ಸಂಕಷ್ಟ ಸಮಯದಲ್ಲಿ ಭಾರತ ಮತ್ತೊಮ್ಮೆ ತನ್ನ ತಾಂತ್ರಿಕ ಪ್ರಗತಿಗೆ ಸಾಕ್ಷಿಯಾಯಿತು. ವೈಜ್ಞಾನಿಕ ಸ್ವಾವಲಂಬನೆ ಸಂಕೇತವಾಗಿ ಕೋವಾಕ್ಸಿನ್ನಂಥ ಸ್ಥಳೀಯ ಲಸಿಕೆ ಅಭಿವೃದ್ಧಿಪಡಿಸಿ ಯಶಸ್ವಿಯಾಗಿ ಬಿಡುಗಡೆಗೊಳಿಸಿತು. ತನ್ನ ನಾಗರಿಕರನ್ನು ರಕ್ಷಿಸುವ ಜತೆಗೆ ಪ್ರಮುಖ ಜಾಗತಿಕ ಲಸಿಕೆ ಪೂರೈಕೆದಾರನಾಗಿ ಹೊರಹೊಮ್ಮಿತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.