ADVERTISEMENT

ಶಿಷ್ಯನ ಏಳ್ಗೆಯೇ ಗುರುವಿಗೆ ದೊಡ್ಡ ಮೌಲ್ಯ: ಚಂದ್ರಶೇಖರ ಅಕ್ಕಿ

ಮಹಾದೇವ ಜಿಡ್ಡಿಮನಿಯವರ ಎರಡು ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:20 IST
Last Updated 16 ಮೇ 2025, 14:20 IST
ಮೂಡಲಗಿಯ ಕುರುಹಿನಶೆಟ್ಟಿ ಅರ್ಬನ್‌ ಕೋ ಆಪ್‌ ಸೊಸೈಟಿಯ ಸಭಾಭವನದಲ್ಲಿ ಶುಕ್ರವಾರ ಮಹಾದೇವ ಜಿಡ್ಡಿಮನಿ ಅವರ ಗುರುಶಿಷ್ಯರ ಆತ್ಮಸಖ್ಯ ಹಾಗೂ ಮಿತ್ರಸಂಮಿತ ಕೃತಿಗಳನ್ನು ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ, ವೀರಯ್ಯ ಮಠಪತಿ ಬಿಡುಗಡೆ ಮಾಡಿದರು 
ಮೂಡಲಗಿಯ ಕುರುಹಿನಶೆಟ್ಟಿ ಅರ್ಬನ್‌ ಕೋ ಆಪ್‌ ಸೊಸೈಟಿಯ ಸಭಾಭವನದಲ್ಲಿ ಶುಕ್ರವಾರ ಮಹಾದೇವ ಜಿಡ್ಡಿಮನಿ ಅವರ ಗುರುಶಿಷ್ಯರ ಆತ್ಮಸಖ್ಯ ಹಾಗೂ ಮಿತ್ರಸಂಮಿತ ಕೃತಿಗಳನ್ನು ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ, ವೀರಯ್ಯ ಮಠಪತಿ ಬಿಡುಗಡೆ ಮಾಡಿದರು    

ಮೂಡಲಗಿ: ‘ಗುರು ಶಿಷ್ಯ ಪರಂಪರೆಯು ಅತ್ಯಂತ ಪವಿತ್ರವಾಗಿದ್ದು, ಶಿಷ್ಯ ಗುರುವನ್ನು ಮೀರಿ ಬೆಳೆದಾಗ ಶಿಷ್ಯನ ಏಳ್ಗೆಯನ್ನು ಕಂಡು ಗುರುವಾದವನು ಪಡುವ ಸಂತೋಷವು ಸಮಾಜದಲ್ಲಿ ಬಹುದೊಡ್ಡ ಮೌಲ್ಯವಾಗಿದೆ’ ಎಂದು ಗೋಕಾಕದ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಚಂದ್ರಶೇಖರ ಅಕ್ಕಿ ಹೇಳಿದರು.

ಕಸಾಪ ಮೂಡಲಗಿ ಘಟಕ, ಚುಟುಕು ಸಾಹಿತ್ಯ ಪರಿಷತ್‌ ಹಾಗೂ ಸ್ನೇಹ ಸಂಕುಲದ ಸಹಯೋಗದಲ್ಲಿ ಸಾಹಿತಿ ಮಹಾದೇವ ಜಿಡ್ಡಿಮನಿ ಅವರ ಗುರುಶಿಷ್ಯರ ಆತ್ಮಸಖ್ಯ ಹಾಗೂ ಮಿತ್ರಸಂಮಿತ ಕೃತಿಗಳನ್ನು ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಶಿಷ್ಯನ ಸಾಧನೆ, ಕೀರ್ತಿಗಳಿಗೆ ಗುರುವಾದವನು ತಾನೇ ತನ್ನ ಸೋಲನ್ನು ಒಪ್ಪಿಕೊಳ್ಳಬೇಕು. ಇದು ಗುರುವಿನ ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಅಂಥ ಶಿಷ್ಯನ ಪ್ರತಿಭೆ ಮಹಾದೇವ ಜಿಡ್ಡಿಮನಿ ಅವರಲ್ಲಿದೆ’ ಎಂದು ಬಣ್ಣಿಸಿದರು.

ADVERTISEMENT

ಸಾಹಿತಿ ಸವದತ್ತಿಯ ವೈ.ಎಂ. ಯಾಕೊಳ್ಳಿ ‘ಗುರುಶಿಷ್ಯರ ಆತ್ಮಸಖ್ಯ’ ಕೃತಿ ಕುರಿತು ಮಾತನಾಡಿದರು.

ಸಾಹಿತಿ ಸಂಗಮೇಶ ಗುಜಗೊಂಡ ಮಿತ್ರಸಂಮಿತ ಕೃತಿ ಕುರಿತು ಮಾತನಾಡಿ, ‘70 ತ್ರಿಪದಿಗಳನ್ನು ಹೊಂದಿರುವ ಕೃತಿಯು ಲೌಕಿಕದೊಂದಿಗೆ ಆಧ್ಯಾತ್ಮಿಕ ರಸಭಾವದಿಂದ ಕೃತಿಯು ಓದುಗರನ್ನು ಸೆಳೆಯುತ್ತದೆ. ಸರ್ವಜ್ಞನ ತ್ರಿಪದಿಗಳು ಮತ್ತು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ತ್ರಿಪದಿಗಳ ಸರಿಸಮಾನವಾಗಿ ಗುರುತಿಸಿಕೊಳ್ಳುತ್ತದೆ’ ಎಂದರು.

ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಸಾಹಿತ್ಯದಿಂದ ಮಹಾಭಾರತ, ರಾಮಾಯಣದಂತ ಮಹಾಕಾವ್ಯಗಳು ದೊರೆತಿದ್ದು, ಸಾಹಿತ್ಯಕ್ಕೆ ಅಂಥ ಅಗಾಧವಾದ ಶಕ್ತಿ ಇದೆ. ಸಾಹಿತಿಗಳು ತಮ್ಮ ಬರವಣಿಗೆಗೆಳ ಮೂಲಕ ನಾಡನ್ನು ಸಾಂಸ್ಕೃತಿಕವಾಗಿ ಸಮೃದ್ಧಗೊಳಿಸಬೇಕು’ ಎಂದರು.

ಕುರುಹಿನಶೆಟ್ಟಿ ಅರ್ಬನ್ ಕೋ ಆಪ್‌ ಸೊಸೈಟಿ ಅಧ್ಯಕ್ಷ ಸುಭಾಷ ಬೆಳಕೂಡ ಅಧ್ಯಕ್ಷತೆ ವಹಿಸಿದ್ದರು.

ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಕೃತಿಕಾರ ಮಹಾದೇವ ಜಿಡ್ಡಿಮನಿ, ಸಾಹಿತಿ ಮಾರುತಿ ದಾಸನ್ನವರ ಮಾತನಾಡಿದರು.

ಸಮಾರಂಭದಲ್ಲಿ ಪಾಲಭಾಂವಿಯ ವೀರಯ್ಯ ಮಠಪತಿ, ಚುಸಾಪ ಅಧ್ಯಕ್ಷ ಚಿದಾನಂದ ಹೂಗಾರ, ಇಸ್ಮಾಯಿಲ ಕಳ್ಳಿಮನಿ, ಐ.ಎಸ್. ಮುರಕನಟ್ನಾಳ, ಎಂ.ಎಂ. ಕಮದಾಳ, ಶಿವಾನಂದ ಬೆಳಕೂಡ, ಬಾಲಶೇಖರ ಬಂದಿ, ವಿ.ಎಸ್. ಹಂಚಿನಾಳ, ಸಿದ್ರಾಮ್ ದ್ಯಾಗಾನಟ್ಟಿ, ಮೂಡಲಗಿ ಬಿಇಒ ಅಜಿತ್ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ. ಬಳಿಗಾರ, ವೈ.ಬಿ. ಪಾಟೀಲ, ಈಶ್ವರಚಂದ್ರ ಬೆಟಗೇರಿ, ಜಯಾನಂದ ಮಾದರ ಇದ್ದರು. ಸುರೇಶ ಲಂಕೆಪ್ಪನ್ನವರ ನಿರೂಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.